ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023 ದಿನಗಳು ಉರುಳಿದಂತೆ ರಾಜಕೀಯ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಒಂದೊಂದೆ ಪಟ್ಟಿಯನ್ನು ಬಿಡುಗಡೆ ಮಾಡುತ್ತಲೇ ಇವೆ. ಆದರೆ, ಬಿಜೆಪಿ ಮಾತ್ರ ಇದುವರೆಗೂ ಒಂದೇ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಬರೀ ಇವತ್ತು, ಸಂಜೆ, ನಾಳೆ ಬಿಡುಗಡೆಯಾಗುತ್ತೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಹೈಕಮಾಂಡ್ ಮಾತ್ರ ಇವರಿಗೆ ಕ್ಯಾರೆ ಎನ್ನುತ್ತಿಲ್ಲ.
ದೆಹಲಿಯಲ್ಲಿ ಸಭೆಯ ಮೇಲೆ ಸಭೆ ನಡೆಸಲಾಗುತ್ತಿದೆ. ಆದರೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲು ಆಗುತ್ತಿಲ್ಲ. ಹೀಗಾಗಿ ಸಧ್ಯ ಕೇಸರಿ ನಾಯಕರ ಪರಿಸ್ಥಿತಿ ನಾಳೆ ಬಾ ಎನ್ನುವಂತಾಗಿದೆ. ಕಳಂಕ ಹೊತ್ತ ಹಾಲಿ ಶಾಸಕರಿಗೆ ಟಿಕೆಟ್ ಘೋಷಿಸಿದರೆ ಆಗುವ ಪರಿಣಾಮ, ತಂದೆಯ ಜೊತೆಗೆ ಮಕ್ಕಳಿಗೆ ಟಿಕೆಟ್ ಕೊಟ್ಟರೆ ಎದ್ದೇಳುವ ಆಕ್ರೋಶ. ಟಿಕೆಟ್ ವಂಚಿತರು ಸಿಡಿದೇಳುವ ಆತಂಕ. ಹೀಗಾಗಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಹ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಮತಕ್ಷೇತ್ರದಲ್ಲಿ ಪ್ರಚಾರ ನಡೆಸಲು ಆಗದೆ ವಿಲವಿಲ ಅಂತಿದ್ದಾರೆ.
ಸರ್ಕಾರದ ವಿರುದ್ಧ ಅಲೆ ಎದೆ. ಭ್ರಷ್ಟ ಸರ್ಕಾರ, ಭ್ರಷ್ಟ ಸಚಿವರು, ಶಾಸಕರು ಅನ್ನೋ ಕಪ್ಪು ಚುಕ್ಕೆ ಕುಳುತಿದೆ. ಇದರಿಂದ ಹೊರಬರಬೇಕು ಅನ್ನೋದು ಒಂದು ಕಡೆ, ಮತ್ತೊಂದು ಕಡೆ ಆಂತರಿಕ ಕಲಹ. ಹೀಗಾಗಿ ಟಿಕೆಟ್ ಘೋಷಿಸುವ ಬದಲು ದಿನಗಳನ್ನು ದೂಡಲಾಗುತ್ತಿದೆ. ಅಂತಿಮ ಕ್ಷಣದಲ್ಲಿ ಟಿಕೆಟ್ ಘೋಷಿಸಿದರೆ ಅದರ ಪರಿಣಾಮ ಬಿಜೆಪಿ ಮೇಲೆ ಒಂದಿಷ್ಟು ಆಗುವುದು ಮಾತ್ರ ಸತ್ಯ.