ಸೇಡಂ: ಖ್ಯಾತ ಕಥೆಗಾರ ಡಾ.ಚೆನ್ನಪ್ಪ ಕಟ್ಟಿ ಅವರಿಗೆ 2019ನೇ ಸಾಲಿನ ‘ಅಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಏಕತಾರಿ ಕಥಾ ಸಂಕಲನ ಕೃತಿಗೆ ಈ ಪ್ರಶಸ್ತಿ ಸಂದಿದ್ದು, ನವೆಂಬರ್ 26ರಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಫಲಕ, ಐದು ಸಾವಿರ ರೂಪಾಯಿ ನಗದು ಪುರಸ್ಕಾರ ಹೊಂದಿದೆ. ಇವರ ಜೊತೆ ಇನ್ನು ಐವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪತ್ರಕರ್ತ ಹಾಗೂ ಕಲಾವಿದ ಮಹಿಪಾಲರೆಡ್ಡಿ ಮುನ್ನೂರ ಅವರ ತಾಯಿ ಮಹಾದೇವಮ್ಮ ನಾಗಪ್ಪ ಮುನ್ನೂರ ಅವರ ನೆನಪಿನಲ್ಲಿ ಕಳೆದ 19 ವರ್ಷಗಳಿಂದ ರಾಜ್ಯಮಟ್ಟದ ಅಮ್ಮ ಪ್ರಶಸ್ತಿ ನೀಡಲಾಗಿದೆ. ಅದೇ ರೀತಿ ನವೆಂಬರ್ 26ರಂದು ಕಲಬುರಗಿಯ ಸೇಡಂ ಪಟ್ಟಣದ ಶ್ರೀಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಯ್ತು.
ಡಾ.ಚೆನ್ನಪ್ಪ ಕಟ್ಟಿ(ಏಕತಾರಿ-ಕಥಸಂಕಲನ), ಜೋಗಿ(ಎಲ್-ಕಾದಂಬರಿ), ಉಡುಪಿಯ ಸುಧಾ ಆಡುಕಳ(ಬಕುಲದ ಬಾಗಿಲಿನಿಂದ-ಲಲಿತ ಪ್ರಬಂಧ), ತುಮಕೂರಿನ ಜಿ.ಎನ್ ನಾಗರಾಜ(ನಿಜರಾಮಾಯಣ ಅನ್ವೇಷಣೆ-ವೈಚಾರಿಕ ಬರಹ), ಕಲಬುರಗಿಯ ಪ್ರಭಾಕರ ಸಾತಖೇಡ(ಮಾಸ್ತಾರರ ನೆರಳಾಗಿ-ಅನುವಾದ) ಹಾಗೂ ಬೆಳಗಾವಿಯ ಭುವನಾ ಹಿರೇಮಠ(ಟ್ರಯಲ್ ರೂಮಿನ ಅಪ್ಸರೆಯರು-ಕವನ ಸಂಕಲನ) ಹೀಗೆ ಒಟ್ಟು 6 ಮಂದಿಗೆ ಅಮ್ಮ ಪ್ರಶಸ್ತಿ ಹಾಗೂ 5 ಮಂದಿಗೆ ಅಮ್ಮ ಗೌರವ ಪುರಸ್ಕಾರವನ್ನ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ ಪ್ರದಾನ ಮಾಡಿದರು.