ಧಾರವಾಡ: ಹುಬ್ಬಳ್ಳಿ ಧಾರವಾಡದಲ್ಲಿ ಕಳೆದೊಂದು ವಾರದಿಂದ ಏನ್ ನಡೀತಿದೆ ಅನ್ನೋದು ಒಂದೂ ತಿಳಿಯುತ್ತಿಲ್ಲ. ಹೆಣಗಳ ಮೇಲೆ ಹೆಣಗಳು ಬೀಳುತ್ತಲೇ ಇವೆ. ಇದಕ್ಕೆ ಇದು ಹೊಸ ಸೇರ್ಪಡೆ. ನಿನ್ನೆ ತಡರಾತ್ರಿ ಧಾರವಾಡದಲ್ಲಿ ಮತ್ತೊಂದು ಚಾಕು ಇರಿತದ ಪ್ರಕರಣ ನಡೆದಿದೆ.
ನಿನ್ನೆ ತಡರಾತ್ರಿ ನಿಜಾಮುದ್ದೀನ್ ಕಾಲೋನಿ ಬಳಿ 18 ವರ್ಷದ ಮಹ್ಮದ ಜುಬೇರ ಎಂಬಾತನಿಗೆ ಚಾಕು ಇರಿಯಲಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ, ಡಿಸಿಪಿಗಳಾದ ಡಿ.ಎಲ್ ನಾಗೇಶ, ಶಿವಕುಮಾರ ಗುಣಾರೆ, ಎಸಿಪಿ ಎಂ.ಎನ್. ರುದ್ರಪ್ಪ, ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಈ ರೀತಿಯ ಪ್ರಕರಣಗಳಿಂದ ಹುಬ್ಬಳ್ಳಿ-ಧಾರವಾಡ ಅಪರಾಧ ಲೋಕವಾಗಿ ಪರಿವರ್ತನೆಯಾಗಲು ಸಜ್ಜಾದಂತೆ ಕಾಣ್ತಿದೆ. ಮರ್ಡರ್ ಮಾಡುವುದು, ಚಾಕು ಇರಿಯುವುದು ಮಾಮೂಲಿಯಾಗ್ತಿದೆ. ಒಂದು ಕಹಿ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆಯುತ್ತೆ. ಇದ್ರಿಂದಾಗಿ ಸಾರ್ವಜನಿಕರು ಜೀವವನ್ನ ಕೈಯಲ್ಲಿ ಹಿಡಿದು ಜೀವನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.