ನವದೆಹಲಿ: ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಿರುವ ಸಿಎಂ ಅರವಿಂದ ಕೇಜ್ರಿವಾಲ್, ಫೆಬ್ರವರಿ 16ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಪದಗ್ರಹಣ ಸಮಾರಂಭಕ್ಕೆ ಪಿಎಂ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆದ್ರೆ, ಹೊರ ರಾಜ್ಯದ ಯಾವೊಬ್ಬ ಮುಖಂಡರಿಗೂ ಆಹ್ವಾನ ನೀಡಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿರುವ ಆಪ್ ಘಟಕದ ಸಂಚಾಲಕ ಗೋಪಾಲ ರಾಯ್, ಪದಗ್ರಹಣ ಕಾರ್ಯಕ್ರಮ ದೆಹಲಿ ಕೇಂದ್ರಿತವಾಗಿರಲಿದೆ. ಕೇಜ್ರಿವಾಲ್ ನಾಯಕತ್ವದಲ್ಲಿ ದೆಹಲಿ ಜನತೆ ಇಟ್ಟ ನಂಬಿಕೆ ಇದಾಗಿದ್ದು, ಅವರೊಂದಿಗೆ ಮಾತ್ರ ಈ ಸಮಾರಂಭ ನಡೆಯಲಿದೆ ಅಂತಾ ತಿಳಿಸಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಆಹ್ವಾನ ನೀಡಲಾಗಿತ್ತು ಅನ್ನೋದು ಸುದ್ದಿಯಾಗಿತ್ತು. ಅದಕ್ಕೆ ತೆರೆ ಬಿದ್ದಿದೆ.
ಪುಟಾಣಿ ಕೇಜ್ರಿಗೆ ಆಹ್ವಾನ:
ಫಲಿತಾಂಶದ ದಿನ ದೇಶದ ಗಮನ ಸೆಳೆದಿದ್ದು ಪುಟಾಣಿ ಕೇಜ್ರಿವಾಲ್ ವೇಷಧಾರಿ. ಒಂದು ವರ್ಷದ ಅಯ್ಯನ್ ತೊಮಾರ್, ಕೇಜ್ರಿವಾಲ್ ರಂತೆ ಕನ್ನಡಕ, ಮಫ್ಲರ್ ಹಾಗೂ ಟೋಪಿ ತೊಟ್ಟು ಎಲ್ಲರ ಗಮನ ಸೆಳೆದಿದ್ದ. ಅಲ್ದೇ, ಈತನ ಕುಟುಂಬ, ಅಂದು ಕೇಜ್ರಿವಾಲ್ ಅವರನ್ನ ಭೇಟಿಯಾಗಲು ಕಾದು ಕಾದು ವಾಪಸ್ ಹೋಗಿದೆ. ಆದ್ರೆ, ಇಂದು ಈ ಪುಟಾಣಿ ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಸ್ಟಾರ್. ಇದೀಗ ಆ ಪುಟಾಣಿಗೆ ಪದಗ್ರಹಣ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಫೆಬ್ರವರಿ 16ರಂದು ರಾಮ್ ಲೀಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.