ಮಕ್ಕಳ ಪ್ರತಿಭೆಗೆ ಶಿಬಿರಗಳು ಸಹಕಾರಿ: ಶಾಂತಗಂಗಾಧರ ಸ್ವಾಮೀಜಿ

290

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಕ್ಕಳು ಬೌದ್ಧಿಕವಾಗಿ ಕ್ರಿಯಾಶೀಲರಾಗಿ ಬೆಳೆಯಲು ಬೇಸಿಗೆ ಶಿಬಿರಗಳು ತುಂಬಾ ಸಹಕಾರಿ. ಕಲಾ ಶಿಬಿರಗಳಿಂದ ಮಕ್ಕಳಲ್ಲಿನ ಪ್ರತಿಭೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಪಟ್ಟಣದ ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಹೇಳಿದರು.

ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಏಪ್ರಿಲ್ 10ರಿಂದ 20 ದಿನಗಳ ಕಾಲ ‘ಬೇಸಿಗೆ ಕಲಾ ಮೇಳ’ ಆಯೋಜಿಸಲಾಗಿತ್ತು. ಅದರ ಸಮಾರೋಪ ಸಮಾರಂಭ ಭಾನುವಾರ ಸಂಜೆ ಆಶ್ರಮದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಪಾಲಕರು ಮಕ್ಕಳಿಗೆ ಬರೀ ಓದು ಓದು ಎಂದು ಒತ್ತಡ ಹಾಕದೆ, ಈ ರೀತಿಯ ಕಮ್ಮಟಗಳಿಗೆ ಕಳಿಸುವುದರಿಂದ ನಿಮ್ಮ ಮಕ್ಕಳು ತುಂಬಾ ಚಟುವಟಿಕೆಯಿಂದ ಎಲ್ಲದರಲ್ಲಿ ಮುಂದೆ ಬರುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಗರಂಜನಿ ಸಂಗೀತ ಅಕಾಡಮಿ ಮುಖ್ಯಸ್ಥ ಪ್ರಕಾಶ ಮೂಡಲಗಿ ಹಾಡುವ ಮೂಲಕ ಮಕ್ಕಳಿಗೆ ಗಾಯನದ ಬಗ್ಗೆ ತಿಳಿಸಿಕೊಟ್ಟರು. ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಪ್ರಾಸ್ತಾವಿಕ ಮಾತುಗಳನ್ನಾಡಿ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅತ್ಯಂತ ಸರಳವಾಗಿ ಸಮಾರೋಪ ಸಮಾರಂಭ ನಡೆಸಬೇಕಾಯಿತು. ಮುಂದಿನ ಸಾರಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲಾಗುವುದು ಅಂತಾ ಹೇಳಿದರು.

ಶಿಬಿರದಲ್ಲಿ ಭಾಗವಹಿಸಿದ ಅಸ್ಮಿತಾ, ತೇಜಸ್ವಿನಿ, ಸಾಹಿತ್ಯ, ಅನುಶ್ರೀ, ಶ್ರಾವಣಿ, ವೈಷ್ಣವಿ, ಶಿವಾನಂದ, ಅಖಿಲಕುಮಾರ, ಸಾತ್ವಿಕ, ಶಶಾಂಕ ಹಾಡು, ನೃತ್ಯ ಹಾಗೂ ಕಿರುನಾಟಕ ಪ್ರದರ್ಶನ ಮಾಡಿದರು. ಈ ವೇಳೆ ಶಿಕ್ಷಕರಾದ ಬಸವರಾಜ ಭೂತಿ, ಗುರನಾಥ ಅರಳಗುಂಡಗಿ, ಪತ್ರಕರ್ತರಾದ ವಿಜು ಪತ್ತಾರ, ಸಂಗಮೇಶ ಡಿಗ್ಗಿ, ಫೌಂಡೇಶನ್ ಸದಸ್ಯರಾದ ಮಲ್ಲು ಹಿರೋಳ್ಳಿ, ರೇಣುಕಾ, ಸುದೀಪ ಸೇರಿ ಅನೇಕರು ಉಪಸ್ಥಿತರಿದ್ದರು. ಸಹನಾ ನಿರೂಪಿಸಿದರು. ಶ್ರೇಯಸ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!