ಪ್ರಜಾಸ್ತ್ರ ಸುದ್ದಿ
ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮದ ನೆಪದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಲು ಬರುತ್ತಲೇ ಇದ್ದಾರೆ. ಭಾನುವಾರ ಸಕ್ಕರೆನಾಡು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದು, ಇದೀಗ ಮಹಾದ್ವಾರ ಎಂದು ಹಾಕಿರುವ ಫ್ಲೆಕ್ಸ್ ಅಶಾಂತಿಯ ಕಿಡಿ ಹೊತ್ತಿಸಿದೆ.
ನಗರದ ಕಾರ್ಖಾನೆ ವೃತ್ತದಲ್ಲಿ(ಬಿ.ಜೆ ದಾಸೇಗೌಡ ವೃತ್ತ) ಬಿಜೆಪಿ ಫ್ಲೆಕ್ಸ್ ಗಳನ್ನು ಅಳವಡಿಸಿದೆ. ಅದು ಉರಿಗೌಡರು, ನಂಜೇಗೌಡರ ಮಹಾದ್ವಾರ ಎಂದು ಬರೆದು ಫೋಟೋಗಳನ್ನು, ಪ್ರಧಾನಿ ಮೋದಿ ಫ್ಲೆಕ್ಸ್ ಅಳವಡಿಸಲಾಗಿದೆ. ಇದರ ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್, ರೈತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರು ಮಾಡಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು, ಅಶಾಂತಿ ಸೃಷ್ಟಿಸುವ ಸಲುವಾಗಿ ಕಪೋಕಲ್ಪಿತ ಇಬ್ಬರು ಹೆಸರುಗಳಲ್ಲಿ ಬೋರ್ಡ್ ಹಾಕಲಾಗಿದೆ. ಈ ಮೂಲಕ ಮಂಡ್ಯಕ್ಕೆ ಅವಮಾನ ಮಾಡಲಾಗುತ್ತಿದೆ. ಸುಳ್ಳು ಹೇಳುವ ಮೂಲಕ ಮತ್ತೊಬ್ಬರ ವಿರುದ್ಧ ಎತ್ತಿಕಟ್ಟಿ ಒಕ್ಕಲಿಗ ಸಮುದಾಯದವರು ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದರು ಅನ್ನೋದನ್ನು ಹೇಳುವ ಮೂಲಕ ಎರಡು ಸಮುದಾಯಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದು, ಫ್ಲೆಕ್ಸ್ ತೆಗೆಯದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.