ಬೆಂಗಳೂರು: ಮಹಾಮಾರಿ ಕರೋನಾ ಭೀತಿಯಿಂದ ಜನರು ಹೈರಾಣಾಗಿದ್ದಾರೆ. ಜಗತ್ತಿನ ತುಂಬಾ ವ್ಯಾಪಿಸಿಕೊಂಡಿರುವ ಕರೋನಾ ವೈರಸ್ ಗೆ ಎಲ್ಲರೂ ಹೆದರಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ಇಂದಿನಿಂದ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳಿಗೆ ಇಂದಿನಿಂದ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ನರ್ಸರಿ, ಎಲ್ ಎಜಿ, ಯುಕೆಜಿ ಮಕ್ಕಳಿಗೆ ರಜೆ ಘೋಷಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತಮ್ಮ ಟ್ವೀಟರ್ ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ಮೂರು ಜಿಲ್ಲೆಯ ಪ್ರಾಥಮಿಕ ಪೂರ್ವ ಮಕ್ಕಳಿಗೆ ರಜೆ ಘೋಷಿಸಿದ್ದು, ಮುಂದಿನ ಆದೇಶ ಬರುವವರೆಗೂ ಇದು ಜಾರಿಯಲ್ಲಿ ಇರಲಿದೆ. ಈಗಾಗ್ಲೇ ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿದ್ದು ಮುಂಜಾಗ್ರತ ಕ್ರಮವಾಗಿ ಈ ಕ್ರಮವನ್ನ ಕೈಗೊಳ್ಳಲಾಗಿದೆ ಎಂದು ಹೇಳಲಾಗ್ತಿದೆ.