ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್, ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜಕುಮಾರ್ ಅವರು ಎಲ್ಲರನ್ನು ಅಗಲಿ ಇಂದಿಗೂ ಒಂದು ವರ್ಷ. ಭೌತಿಕವಾಗಿ ಅವರು ಇರದೆ ಇದ್ದರೂ, ಕರುನಾಡಿನ ಪ್ರತಿಯೊಬ್ಬರ ಮನದಲ್ಲಿ ಸದಾ ಹಚ್ಚ ಹಸಿರಾಗಿದ್ದಾರೆ.
ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಪ್ರತಿಯೊಬ್ಬರು ನಮನ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಸೇರಿ ರಾಜಕೀಯ ರಂಗದವರು ಹಾಗೂ ಬೇರೆ ಬೇರೆ ಕ್ಷೇತ್ರದ ಗಣ್ಯಾತಿಗಣ್ಯರು ಸಹ ಅಪ್ಪುಗೆ ಗೌರವ ನಮನ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋ ಬಳಿಯಿರುವ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಈ ವೇಳೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿ ಎಲ್ಲರು ಕಣ್ಣೀರು ಹಾಕಿದರು. ಅಭಿಮಾನಿಗಳಂತೂ ನೆಚ್ಚಿನ ನಟನ ಅಗಲಿಕೆಯಿಂದ ಇಂದಿಗೂ ಹೊರ ಬಂದಿಲ್ಲ. ನಿತ್ಯವೂ ಅವರ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಇಂದು ಬಹುದೊಡ್ಡ ಜಾತ್ರೆಯೇ ನಡೆದಿದೆ.