ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತದಾನ ಅಕ್ಟೋಬರ್ 30ರಂದು ನಡೆದಿದೆ. ನವೆಂಬರ್ 2 ಮಂಗಳವಾರ ಬೆಳಗ್ಗೆ ಮತ ಎಣಿಕೆ ಕಾರ್ಯ ಶುರುವಾಗಲಿದ್ದು, ಈಗಾಗ್ಲೇ ಅಭ್ಯರ್ಥಿಗಳ ಎದೆ ಬಡಿತ ಜೋರಾಗಿದೆ.
ಹಾನಗಲ್ ನಲ್ಲಿ ಶೇಕಡ 83.44 ಹಾಗೂ ಸಿಂದಗಿಯಲ್ಲಿ 69.41ರಷ್ಟು ಮತದಾನವಾಗಿದೆ. ಎರಡು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಫೈಟ್ ಆಗುವ ಸಾಧ್ಯತೆಯೇ ಹೆಚ್ಚಿದೆ. ಜೆಡಿಎಸ್ ತೀವ್ರ ಸ್ಪರ್ಧೆ ನೀಡುವುದು ಕಷ್ಟಸಾಧ್ಯ. ಇನ್ನು ಇತರೆ ಪಕ್ಷಗಳು, ಪಕ್ಷೇತರರು ಎಷ್ಟರ ಮಟ್ಟಿಗೆ ಠಕ್ಕರ್ ಕೊಟ್ಟಿರುತ್ತಾರೆ ಅನ್ನೋದು ಸಹ ಕುತೂಹಲ ಮೂಡಿಸಿದೆ.
ಎರಡೂ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳ ಘಟಾನುಘಟಿ ನಾಯಕರುಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೊಮ್ಮಾಯಿ ಸಿಎಂ ಆದ್ಮೇಲೆ ನಡೆದ ಮೊದಲ ಚುನಾವಣೆ. 2023ರ ಸಾವ್ರರ್ತಿಕ ಚುನಾವಣೆ ನೇತೃತ್ವಕ್ಕೆ ಇದು ಮುನ್ನುಡಿಯಾಗಬಹುದು. ಅದೆ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಈ ಗೆಲುವು ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಉಪ ಚುನಾವಣೆಯ ಫಲಿತಾಂಶ 2023ರ ದಿಕ್ಸೂಚಿ ಎನ್ನಲಾಗುತ್ತಿದ್ದು, ಯಾರಿಗೆ ಇದು ಸಿಹಿ ಸುದ್ದಿ ನೀಡುತ್ತೆ ಅನ್ನೋದು ನಾಳೆ ತಿಳಿಯಲಿದೆ.
ಹಾನಗಲ್-ಸಿಂದಗಿಯಲ್ಲಿನ ಅಭ್ಯರ್ಥಿಗಳು:
ಹಾನಗಲ್ ನಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ, ಕಾಂಗ್ರೆಸ್ಸಿನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್ ನಿಂದ ನಿಯಾಜ್ ಶೇಖ್, ಕೆಆರ್ ಎಸ್ ನಿಂದ ಉಡಚಪ್ಪ ಉದ್ದನಕಾಲ, ರೈತ ಭಾರತ ಪಕ್ಷದಿಂದ ಫಕೀರಗೌಡ ಶಂಕರಗೌಡ ಗಾಜಿಗೌಡ್ರ, ಲೋಕ ಶಕ್ತಿ ಪಕ್ಷದಿಂದ ಶಿವಕುಮಾರ ತಳವಾರ, ಪಕ್ಷೇತರರಾಗಿ ಉಮೇಶ ದೈವಜ್ಞ, ಸಿದ್ದಪ್ಪ ಪೂಜಾರ, ಎಸ್.ಎಸ್ ದೊಡ್ಡಲಿಂಗಣ್ಣನವರ, ಸೋಮಶೇಖರ ಕೋತಂಬರಿ, ಹೊನ್ನಪ್ಪ ಅಕ್ಕಿವಳ್ಳಿ ಸೇರಿ 13 ಜನ ಕಣದಲ್ಲಿದ್ದಾರೆ.
ಸಿಂದಗಿಯಲ್ಲಿ ಬಿಜೆಪಿಯಿಂದ ರಮೇಶ ಭೂಸನೂರ, ಕಾಂಗ್ರೆಸ್ಸಿನಿಂದ ಅಶೋಕ ಮನಗೂಳಿ, ಜೆಡಿಎಸ್ ನಿಂದ ನಾಜಿಯಾ ಶಕೀಲ್ ಅಂಗಡಿ, ಕೆಆರ್ ಎಸ್ ನಿಂದ ಡಾ.ಸುನೀಲಕುಮಾರ ಹಬ್ಬಿ, ಪಕ್ಷೇತರರಾಗಿ ಜಿಲಾನಿ ಗುಡುಸಾಬ್ ಮುಲ್ಲಾ, ದೀಪಿಕಾ.ಎಸ್ ಅವರ ರಾಜಕೀಯ ಭವಿಷ್ಯ ನಾಳೆ ತಿಳಿಯಲಿದೆ.