ಬೆಂಗಳೂರು: ಇಂದು ಬೆಳ್ಳಂಬೆಳ್ಗೆಯಿಂದಲ್ಲೇ ರಾಜ್ಯ ರಾಜಧಾನಿಯಲ್ಲಿ ಮಳೆಯಾಗ್ತಿದೆ. ಅಲ್ದೇ, ಇಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದ್ದು, ಹೀಗಾಗಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಇಂದು ಮೂರನೇ ಟಿ-20 ಪಂದ್ಯ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ನಡೆಯಲಿದೆ. ಸರಣಿಯಲ್ಲಿ ಈಗಾಗ್ಲೇ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನ ಗೆಲ್ಲುವ ತವಕದಲ್ಲಿದೆ. ಆದ್ರೆ, ವರುಣದೇವ ಅಬ್ಬರಿಸಲು ಶುರು ಮಾಡಿದ್ರೆ ಪಂದ್ಯದ ಕಥೆ ಮುಗೀತು.
ಭಾನುವಾರ ಆಗಿರುವುದ್ರಿಂದ ಭರ್ಜರಿ ಟಿಕೆಟ್ ಮಾರಾಟವಾಗಿವೆ. ಇಂಡಿಯನ್ ಕ್ರಿಕೆಟ್ ಟೀಂ ಅಭಿಮಾನಿಗಳು ಪಂದ್ಯ ನೋಡಲು ಕಾಯುತ್ತಿದ್ದಾರೆ. ಆದ್ರೆ, ಇಂದು ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಬಹುತೇಕ ಪಂದ್ಯ ಮಳೆಗೆ ಬಲಿಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.