ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಆಂತರಿಕ ಸಂಘರ್ಷ ಜೋರಾಗುತ್ತಿದೆ. ಕಮಲ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತಮ್ಮ ಎಂದಿನ ಆಕ್ರೋಶ ಮುಂದುವರೆಸಿದ್ದಾರೆ. ಶಾಸಕರಾದ ಯತ್ನಾಳ, ಜಾರಕಿಹೊಳಿ, ಅರವಿಂದ್ ಬೆಲ್ಲದ್, ಮಾಜಿ ಶಾಸಕರಾದ ವಿ.ಸೋಮಣ್ಣ, ಲಿಂಬಾವಳಿ ಟೀಂ ದೆಹಲಿ ಪಯಣ ಬೆಳಸುತ್ತಿದೆ.
ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ಎರಡೂ ತಪ್ಪಿರುವುದರಿಂದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ತಮ್ಮ ಎಂದಿನ ವಾಗ್ದಾಳಿ ಮುಂದುವರೆಸಿದ್ದಾರೆ. ನೂತನ ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬರೋದು ಬೇಡ ಎಂದಿದ್ದಾರೆ. ನಾವು ಅವರ ಮನೆಗೆ ಹೋಗ್ತೀವಿ ಎಂದು ಎಲ್ಲಿ ಹೇಳಿವಿ ಅಂತಾ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮತ್ತೊಂದು ಕಡೆ ವಿ.ಸೋಮಣ್ಣ ಎರಡು ಕಡೆ ನಿಲ್ಲಿಸಿ ನನ್ನನ್ನು ಸೋಲಿಸಿದರು ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಲಿಂಬಾವಳಿ ಸಹ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಇವರ ಜೊತೆಗೆ ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಸ್ವಪಕ್ಷೀಯ ನಾಯಕರ ವಿರುದ್ಧ ಸಮರ ಸಾರಿದ್ದು, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರಂತೆ. ಈ ಕಚ್ಚಾಟಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ಎಷ್ಟರ ಮಟ್ಟಿಗೆ ದೆಹಲಿ ನಾಯಕರು ತಣ್ಣಗೆ ಮಾಡುತ್ತಾರೆ ಅನ್ನೋ ಕುತೂಹಲವಿದೆ.