ಪ್ರಜಾಸ್ತ್ರ ಅಪರಾಧ ಸುದ್ದಿ
ಕಲಬುರಗಿ: ಜಿಲ್ಲೆಯ ಅಫಜಲಪೂರ ತಾಲೂಕಿನ ಬಂದರವಾಡ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯನ ಪತ್ನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಕಂಡು ಪೊಲೀಸರಿಗೆ ಶಾಕ್ ಆಗಿದೆ.
ಮಾರ್ಚ್ 13ರಂದು ಬೆಳಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ಹೊಲಕ್ಕೆ ನೀರು ಬಿಡಲು ಶಾಮಲಾಬಾಯಿ ಕಟ್ಟಿಮನಿ(35) ಹೋಗಿದ್ದಳು. ಹೀಗೆ ಹೋದವಳು ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಸಿಕ್ಕಿದ್ದಳು. ಈ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಘಟನೆ ಸ್ಥಳಕ್ಕೆ ಬಂದ ಪತಿ ಬಸವರಾಜ ಕಣ್ಣೀರು ಹಾಕಿದ್ದ. ಹೀಗೆ ಕಣ್ಣೀರು ಹಾಕಿದ ಕಿಲಾಡಿಯೇ ಕೊಲೆಯ ಆರೋಪಿ.
ಕೊಲೆಯಾದ ಶಾಮಲಾಬಾಯಿ ಹಾಗೂ ಪತಿ ಬಸವರಾಜ ನಡುವೆ ಆಗಾಗ ಜಗಳವಾಗುತಿತ್ತು. ಒಮ್ಮೆ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ ಬಸವರಾಜ ರಾಜಕೀಯ ಎಂದು ತಿರುಗಾಡುತ್ತಾ ಇದ್ದ. ಆದರೆ, ಕಳೆದ ಬಾರಿ ಸೋಲು ಅನುಭವಿಸಿದ್ದ. ಇದಕ್ಕಾಗಿ ಸಾಲ ಮಾಡಿಕೊಂಡಿದ್ದ. ಕುಡಿದು ಹೆಂಡ್ತಿಯ ಜೊತೆ ಜಗಳ ಮಾಡುತ್ತಿದ್ದ.
ಗಂಡನ ಕಾಟದಿಂದ ಬೇಸತ್ತು ಪತ್ನಿಯೇ ಹೊಲದ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡು ಜೀವನ ಮಾಡುತ್ತಿದ್ದಳು. ಜೊತೆಗೆ ಬೇರೆಯವರ ಹೊಲ ಸಹ ನೋಡಿಕೊಂಡು ಹೋಗುತ್ತಿದ್ದಳು. ತನಗೆ ಕುಡಿಯಲು ಹಣ ಕೊಡುತ್ತಿಲ್ಲ. ಹೊಲ ಮಾರಲು ಆಗುತ್ತಿಲ್ಲವೆಂದು ಹೆಂಡ್ತಿಯ ಜೊತೆಗೆ ಅಂದು ಜಗಳ ತೆಗೆದಿದ್ದ. ಈ ವೇಳೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಅರೆಬೆತ್ತಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ತನ್ನ ಕೃತ್ಯ ಬಯಲಾಗದಂತೆ ಮಾಡಲು ಪಕ್ಕದ ಗ್ರಾಮದ ದನದ ಜಾತ್ರೆಗೆ ಹೋಗಿದ್ದಾನೆ. ಅಲ್ಲಿ ಊರಿನ ಜನರನ್ನು ಮಾತನಾಡಿಸುತ್ತಾ ಕಾಲ ಕಳೆದಿದ್ದಾನೆ. ಆ ಮೂಲಕ ಘಟನೆ ನಡೆದ ದಿನ ನಾನು ಪಕ್ಕದ ಊರಲ್ಲಿದ್ದೆ ಎಂದು ಬಿಂಬಿಸಲು ನೋಡಿದ್ದಾನೆ. ಆದರೆ, ಇವನ್ನು ಬಗ್ಗೆ ಊರಲ್ಲಿ ವಿಚಾರಿಸಿದಾಗ ಹೆಂಡ್ತಿಯ ಜೊತೆಗೆ ಪದೆಪದೆ ಜಗಳವಾಡುವುದು ಕುರಿತು ಜನರು ಹೇಳಿದ್ದಾರೆ. ಆಗ ಅವನನ್ನು ವಿಚಾರಣೆಗೆ ಕರೆದು ಪೊಲೀಸ್ ಸ್ಟೈಲ್ ನಲ್ಲಿ ಹೇಳಿದಾಗ ಬಾಯಿ ಬಿಟ್ಟಿದ್ದಾನೆ.