ಪ್ರಜಾಸ್ತ್ರ ಸುದ್ದಿ
ಧಾರವಾಡ: ಸಾಹಿತ್ಯ, ರಂಗಭೂಮಿ, ಸಿನಿಮಾ ಚಟುವಟಿಕೆಗಳನ್ನು ಮಾಡಿಕೊಂಡು ಬರವ ನಿಟ್ಟಿನಲ್ಲಿ ಕಳೆದ ಒಂದು ವರ್ಷದ ಹಿಂದೆ ಜನ್ಮ ತಾಳಿದ ಮಾಧ್ಯಮರಂಗ ಫೌಂಡೇಶನ್ ಲೋಗೋವನ್ನು, ಮಾಜಿ ಶಾಸಕ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ್ ಬೆಲ್ಲದ್ ಬಿಡುಗಡೆ ಮಾಡಿದರು. ಶುಕ್ರವಾರ ಸಂಜೆ ಅವರ ನಿವಾಸದಲ್ಲಿ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಚಂದ್ರಕಾಂತ್ ಬೆಲ್ಲದ್, ಮಾಧ್ಯಮದಲ್ಲಿ ಕೆಲಸ ಮಾಡುವ ಹಾಗೂ ಇತರೆ ಕ್ಷೇತ್ರದಲ್ಲಿರುವ ಸ್ನೇಹಿತರು ಕೂಡಿಕೊಂಡು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಿರುವುದು ಖುಷಿಯ ಸಂಗತಿ. ಮಾಧ್ಯಮರಂಗ ಫೌಂಡೇಶನ್ ವೇದಿಕೆ ಮೂಲಕ ಸಾಹಿತ್ಯದ ಸೇವೆ, ಕನ್ನಡದ ಸೇವೆ ಮಾಡುವುದರೊಂದಿಗೆ ರಾಜ್ಯ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ. ನಾನು ಸಹ ರಂಗಭೂಮಿಯ ಮೂಲಕವೇ ಹೋರಾಟ, ರಾಜಕೀಯಕ್ಕೆ ಬಂದವನು ಅಂತಾ ಹೇಳಿದರು.
ಈ ಫೌಂಡೇಶನ್ ನಲ್ಲಿ ವಿಜಯಪುರ, ಧಾರವಾಡ, ಕೊಪ್ಪಳ, ಬೆಂಗಳೂರು, ಮೈಸೂರು ಸ್ನೇಹಿತರೆಲ್ಲ ಇರುವುದು ಕೇಳಿ ಖುಷಿಯಾಯ್ತು. ಇವರೆಲ್ಲ ಕೂಡಿಕೊಂಡು ಎಲ್ಲೆಡೆ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಲಿ ಎಂದು ಹಾರೈಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಫೌಂಡೇಶನ್ ಉಪಾಧ್ಯಕ್ಷ ಪ್ರಕಾಶ ಏಳುಗುಡ್ಡ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪೂಜಾರ, ರಾಮಚಂದ್ರ ಗರಗ, ರಾಜು ಗಾಳಿ ಉಪಸ್ಥಿತರಿದ್ದರು.