ಪ್ರಜಾಸ್ತ್ರ ಸುದ್ದಿ
ತುಮಕೂರು: ಮದುವೆಯಾಗಿ ಖುಷಿ ಖುಷಿಯಾಗಿದ್ದ ಜೋಡಿಗೆ ಇದೀಗ ಕ್ವಾರಂಟೈನ್ ಫಿಕ್ಸ್ ಆಗಿದೆ. ಮಧುಚಂದ್ರಕ್ಕೆ ಹೋಗಬೇಕಿದ್ದ ಜೋಡಿ, ಗೃಹಬಂಧಿಯಾಗಿದೆ. ಯಾಕಂದ್ರೆ, ಕರೋನಾ ತಂದ ಪಜೀತಿಯಾಗಿದೆ.
ಜಿಲ್ಲೆಯ ಗುಬ್ಬಿ ತಾಲೂಕಿನ ಹೆರೂರಿನಲ್ಲಿ ಸರಳವಾಗಿ ಮದುವೆ ನಡೆದಿದೆ. ಹುಡುಗನ ಮನೆ ಮುಂದೆ ಕಲ್ಯಾಣವಾಗಿದೆ. ಇವರನ್ನ ಆಶೀರ್ವಾದ ಮಾಡಲು ಬಂದ ಬಂಧು ಬಳಗಕ್ಕೆ ಅಡುಗೆಗಾಗಿ ಭಟ್ಟನನ್ನ ಕರೆಸಲಾಗಿದೆ. 55 ವರ್ಷದ ಭಟ್ಟ ಅಡುಗೆ ಮಾಡಿದ್ದಾನೆ. ಬಂದವರೆಲ್ಲ ಊಟ ಮಾಡಿದ್ದಾರೆ. ಆದ್ರೆ, ಆ ಭಟ್ಟನಿಗೆ ಕರೋನಾ ಸೋಂಕು ತಗುಲುರಿವುದು ದೃಢಪಟ್ಟಿದೆ.
ಜೂನ್ 14ರಂದು ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಬಂದ ಅಡುಗೆ ಭಟ್ಟ, ಎಲ್ಲೆಡೆ ತಿರುಗಾಡಿ ಅಡುಗೆ ಮಾಡಿದ್ದಾನೆ. ಹೀಗಾಗಿ ವಧು-ವರರು, ಸಂಬಂಧಿಕರು, ವಿಡಿಯೋಗ್ರಾಫರ್ ಸೇರಿದಂತೆ ಭಟ್ಟನಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 56 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಸೋಂಕು ತಗುಲಿದ ಭಟ್ಟನಿಗೆ ಪ್ರಯಾಣದ ಹಿನ್ನೆಲೆಯಿಲ್ಲ. ಆದ್ರೆ, ಈತನಿಗೆ ಟಿಬಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿ ಬಂದಿದ್ದ. ಅಲ್ಲಿ ಏನಾದ್ರೂ ಸೋಂಕು ತಗುಲಿರಬಹುದು ಎನ್ನಲಾಗ್ತಿದೆ.