ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ಇಂಡಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ಕಳೆದ ಫೆಬ್ರವರಿ 8ರಂದು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿತ್ತು. ಈ ಘಟನೆ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಶರಣಬಸಪ್ಪ ಗಣಪತಿ ಹರಿಜನ(35) ಹಾಗೂ ಬಾಬು ಮಲಕಪ್ಪ ದೇವರಮನಿ(34) ಎಂಬುವರನ್ನ ಬಂಧಿಸಲಾಗಿದೆ. ಮಾರ್ಸನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಸೇರಿದೆ. ಶಿವಮ್ಮ ಮಾದರ ಎಂಬುವರು ಅಧ್ಯಕ್ಷರು ಆಗ್ತಾರೆ ಅನ್ನೋ ಸಿಟ್ಟಿನಿಂದ ಅದನ್ನ ನಿಲ್ಲಿಸುವ ಸಲುವಾಗಿ, ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ರೆ ಗಲಾಟೆಯಾಗಿ ಚುನಾವಣೆ ನಿಲ್ಲುತ್ತದೆ ಎಂದು ಹೀಗೆ ಮಾಡಿದ್ದಾರೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ತಿಳಿಸಲಾಗಿದೆ.
ಈ ಘಟನೆ ನಡೆದ್ಮೇಲೆ ಆರೋಪಿಗಳ ಪತ್ತೆ ಸಂಬಂಧ ಪ್ರತಿಭಟನೆಗಳು ನಡೆದಿದ್ವು. ಹೀಗಾಗಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ 2 ತಂಡಗಳನ್ನ ರೆಡಿ ಮಾಡಿ, ಖಚಿತ ಮಾಹಿತಿ ಕಲೆ ಹಾಕಿ ಇಬ್ಬರನ್ನ ಬಂಧಿಸಲಾಗಿದೆ. ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.