ಅಥಣಿ: ಗೋವಾದಿಂದ ವಲಸೆ ಕಾರ್ಮಿಕರು ಛತ್ತಿಸಗಢಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದ 30 ಜನರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ. ಕಾಲ್ನಡಿಗೆ ಮೂಲಕ ಹೊರಟವರನ್ನ ತಾಲೂಕಿನ ಸಂಕ್ರಹಟ್ಟಿ ಗ್ರಾಮಸ್ಥರು ವಿಚಾರಿಸಿ, ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ರು.
ಸ್ಥಳಕ್ಕೆ ತಹಶೀಲ್ದಾರ್, ಪಿಡಿಓ, ಪೊಲೀಸ್ ಅಧಿಕಾರಿಗಳು ಬಂದು 30 ಜನರ ಆರೋಗ್ಯ ತಪಾಸಣೆ ಮಾಡಿ ಸಂಕ್ರಹಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಮುಂದಾದಾಗ, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಬಳಿಕ ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು ಶಾಲೆಯಲ್ಲಿ ಕ್ವಾರಂಟೈನ್ ಮಾಡಿ, ಆರೋಗ್ಯ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಅಲ್ದೇ, ಸ್ಥಳಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ರು.
ಈ ವೇಳೆ ತಹಶೀಲ್ದಾರ್ ದುಂಡಪ್ಪ ಕೋಮಾರ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪ, ಸಿಪಿಐ ಶಂಕರಗೌಡ ಬಸನಗೌಡರ, ಪಿಡಿಓ ಕೆ.ಎಮ್.ಸತ್ತಿಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.