ಪ್ರಜಾಸ್ತ್ರ ಸುದ್ದಿ
ಮೈಸೂರು: ಎಂಥಾ ಕಷ್ಟದಲ್ಲಿಯೂ ಓದಿ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ಸಾಕಷ್ಟು ಸಾಧಕರು ನಮಗೆ ಸಾಕ್ಷಿಯಾಗಿದ್ದಾರೆ. ಇದೇ ರೀತಿ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ತೇಜಸ್ವಿನಿ ಎಂ.ಎ ಕನ್ನಡ ವಿಷಯದಲ್ಲಿ 10 ಚಿನ್ನದ ಪದಕ 4 ನಗದು ಬಹುಮಾನ ಪಡೆದಿದ್ದಾರೆ.
ಇಂದು ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಗಣ್ಯರಿಂದ ತೇಜಸ್ವಿನಿ ಚಿನ್ನದ ಪದಕ ಪಡೆದು ಸಂಭ್ರಮಿಸಿದರು. 4ನೇ ತರಗತಿ ಇದ್ದಾಗಲೇ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿನಿ, ದ್ವಿತೀಯ ಪಿಯುಸಿ ಓದುವಾಗ ತಂದೆಯನ್ನೂ ಸಹ ಕಳೆದುಕೊಂಡರು. ಇಂತಹ ತೇಜಸ್ವಿನಿಗೆ ಶಿಕ್ಷಕರು, ಉಪನ್ಯಾಸಕರು ಆಸರೆಯಾದರು.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ.ಎ ಮಾಡಿದರು. ಅಲ್ಲಿಯೂ ಸಹ 9 ಚಿನ್ನದ ಪದಕ, 10 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದರು. ಎಂ.ಎ ಪದವಿಯಲ್ಲಿಯೂ ಬರೋಬ್ಬರಿ 9 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ. ಇನ್ನು ಹುಟ್ಟಿನಿಂದಲೇ ಅಂಧೆಯಾದ ಎಸ್.ಅನಘಾ ಸಹ ಎಂ.ಎ ಕನ್ನಡದಲ್ಲಿ ಒಂದು ಚಿನ್ನದ ಪದಕ ಸಾಧನೆ ಮಾಡಿದ್ದಾರೆ.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಗೋಕಲ್ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್ ಸೀತಾರಾಮ್, ಸುದರ್ಶನ ನರಸಿಂಹ ಕ್ಷೇತ್ರದ ಪೀಠಾಧಿಪತಿ ಭಾಷ್ಯಂ ಸ್ವಾಮಿಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.