ಪ್ರಜಾಸ್ತ್ರ ಕ್ರೀಡಾ ಸುದ್ದಿ
ಡೆಹರಾಡೂನ್: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರ ಗುರುತಿಸಿ ಕೋಟಿ ಕೋಟಿ ಬಹುಮಾನದ ಜೊತೆಗೆ ಸರ್ಕಾರಿ ನೌಕರಿ ಸಹ ಕೊಡುತ್ತೆ. ಆದ್ರೆ, ಕೆಲವೊಮ್ಮೆ ಎಷ್ಟೇ ಸಾಧನೆ ಮಾಡಿದರೂ ಅವರಿಗೆ ನೆರವು ಅನ್ನೋದು ಗಗನಕುಸುಮವಾಗಿರುತ್ತೆ. ಹೀಗಾಗಿ ಇಂದಿಗೂ ಅದೆಷ್ಟೋ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಜೀವನ ಸಾಗಿಸಲು ಒದ್ದಾಡ್ತಿದ್ದಾರೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ್ದಲ್ಲಿ ನಡೆದ ಪಾರಾ ಶೂಟಿಂಗ್ ನಲ್ಲಿ ಭಾಗವಹಿಸಿ ಬರೋಬ್ಬರಿ 28 ಚಿನ್ನದ ಪದಕ, 8 ಬೆಳ್ಳಿ ಪದಕ ಹಾಗೂ 3 ಕಂಚಿನ ಪದಕ ಪಡೆದ ಉತ್ತರಾಖಂಡದ ದಿಲ್ ರಾಜ್ ಕೌರ್ ಇಂದು ಬೀದಿ ಬದಿ ಕುರುಕಲು ತಿಂಡಿ ಮಾರಾಟ ಮಾಡುತ್ತಾ ಬಾಡಿಗೆ ಮನೆಯಲ್ಲಿ ಜೀವನ ಮಾಡ್ತಿದ್ದಾರೆ.
ಡೆಹರಾಡೂನ್ ನ ಗಾಂಧಿ ಪಾರ್ಕ್ ಬಳಿ ಬಿಸ್ಕೆಟ್, ಚೀಪ್ಸ್ ಮಾರಾಟ ಜೀವನ ಮಾಡ್ತಿರುವ ಕೌರ್ ಕುರಿತು ಎಎನ್ಐ ಸೇರಿದಂತೆ ಇತರೆ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ತಮ್ಮ ಸಾಧನೆ ಕುರಿತು ಕೇಂದ್ರ ಅಥವ ರಾಜ್ಯ ಸರ್ಕಾರ ನೌಕರಿ ಕೊಡುತ್ತಾ ಎಂದು ಅಲೆದಾಡಿದ್ದೆ ಬಂತು, ನೌಕರಿ ಸಿಗ್ಲಿಲ್ಲವೆಂದು 38 ವರ್ಷದ ದಿಲ್ ರಾಜ್ ಕೌರ್ ನೋವು ತೋಡಿಕೊಂಡಿದ್ದಾರೆ.
ಕ್ರಿಕೆಟ್, ಟೆನ್ನಿಸ್, ಬ್ಯಾಡ್ಮಿಂಟನ್, ಹಾಕಿ ಅಂತಾ ಆಟಗಾರರಿಗೆ ನೀಡುವಷ್ಟು ಸೌಲಭ್ಯ ಹಾಗೂ ಸವಲತ್ತುಗಳನ್ನ ಸರ್ಕಾರಗಳು ಇತರೆ ಕ್ರೀಡೆಯಲ್ಲಿ ರಾಷ್ಟ್ರಕ್ಕೆ ಹೆಸರು ತಂದುಕೊಟ್ಟ ಸಾಧಕರನ್ನ ಸಹ ಗುರುತಿಸಿ, ಅವರು ಗೌರವಯುತ ಜೀವನ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ದೇ, ಹೋದ್ರೆ ವ್ಯಾಪಾರೀಕರಣವಾಗಿರುವ, ಹಣ, ಹೆಸರು, ಐಷಾರಾಮಿ ಜೀವನ ತಂದುಕೊಡುವ ಆಟದ ಕಡೆ ಜನರು ಮುಖ ಮಾಡ್ತಾರೆ.