ಪ್ರಜಾಸ್ತ್ರ ಸುದ್ದಿ
ಅಳ್ನಾವರ: ಇಲ್ಲಿನ ಸಾಲು ಮರದ ವೃಕ್ಷ ಉದ್ಯಾನವನ್ನು ಸಚಿವ ಶಂಕರ್ ಪಾಟೀಲ್ ಮೂನೇನಕೊಪ್ಪ ಸೋಮವಾರ ಉದ್ಘಾಟಿಸಿದರು. 19 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪಾರ್ಕ್ ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಮೂನೇನಕೊಪ್ಪ, ನೈಸರ್ಗಿಕ ವಾತಾವರಣದಲ್ಲಿ ಅದ್ಭುತವಾದ ತಿಮ್ಮಕ್ಕನ ಉದ್ಯಾನವನ ನಿರ್ಮಾಣ ಸಂತಸದ ಸಂಗತಿ. ಈ ಉದ್ಯಾನವನದ ಹೆಚ್ಚಿನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ, ಸಹಾಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಸ್ವಿಮಿಂಗ್ ಫೂಲ್, ಬೋಟಿಂಗ್, ಹಳ್ಳ ದಾಟಲು ರೈತರಿಗೆ ಸೇತುವೆ ನಿರ್ಮಾಣ ಮಾಡುತ್ತೇವೆ. ಅರಣ್ಯ ಇಲಾಖೆಯವರ ಅವಿರತ ಶ್ರಮದಿಂದ ರಾಜ್ಯದ ಜನತೆ ಅಳ್ನಾವರದತ್ತ ತಿರುಗಿ ನೋಡುವಂತೆ ಮಾಡಿದ್ದು ವಿಶೇಷ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ, ಅಳ್ನಾವರ ಚಿಕ್ಕ ತಾಲೂಕಾದರು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಕೆಲವೊಂದು ಪ್ರಾರಂಭವಾಗಿವೆ, ಕೆಲವು ಕಾರ್ಯಗಳು ಮುಕ್ತಾಯದ ಹಂತ ತಲುಪಿವೆ. ಕಾಳಿ ನದಿ ನೀರು ಅಳ್ನಾವರಕ್ಕೆ ಬಂದಿದರ ಜೊತೆಗೆ ತಿಮ್ಮಕ್ಕನ ಉದ್ಯಾನವನ ನಿರ್ಮಾಣವಾಗಿದ್ದು ಎಲ್ಲರಿಗೂ ಖುಷಿ ನೀಡಿದೆ. ಅರಣ್ಯ ಇಲಾಖೆಯವರ ಶ್ರಮದಿಂದ ಕುಡುಕರ ತಾಣವಾಗಿದ್ದ ಈ ನೆಲ ಇಂದು ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದು ವಿಶೇಷ ಎಂದು ಶ್ಲಾಘಿಸಿದರು.
ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸಮಿತಾ ಅಮರಶೆಟ್ಟಿ, ಹಳಿಯಾಳ ವಿಭಾಗದ ಉಪ ವಲಯ ಸಂರಕ್ಷಣಾಧಿಕಾರಿ ಡಾ.ಅಜಯ್ ಜಿ.ಆರ್, ವಲಯ ಅರಣ್ಯಾಧಿಕಾರಿ ಮಹೇಶ್ ಹಿರೇಮಠ, ಅಳ್ನಾವರ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಕಂಬಾರ, ತಹಶೀಲ್ದಾರ್ ಅಮರೇಶ್ ಪಮ್ಮಾರ್, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನಂದೀಮ್ ಕಾಂಟ್ರಾಕ್ಟರ್, ಉದ್ಯಮಿ ಎಂ.ಸಿ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.