ಕುಂದಗೋಳ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಸಾಕಷ್ಟು ರಂಗು ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಕೈ-ಕೇಸರಿ ಪಡೆಯ ಘಟಾನುಘಟಿ ನಾಯಕರು ಕುಂದಗೋಳದಲ್ಲಿ ಬೀಡುಬಿಟ್ಟಿದ್ದಾರೆ. ಇದರ ನಡುವೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತ ಅಧ್ಯಕ್ಷ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಸಚಿವ ದಿ.ಸಿ.ಎಸ್ ಶಿವಳ್ಳಿ ಅವರಿಗೆ ಬಿಜೆಪಿ 25 ಕೋಟಿ ರೂಪಾಯಿ ಆಫರ್ ನೀಡಿತ್ತು ಅಂತಾ ಹೇಳಿದ್ದಾರೆ. ಈ ಹಿಂದೆ ಶಿವಳ್ಳಿ ಅವರು ನನಗೆ ಫೋನ್ ಮಾಡಿದ್ದರು. ಆಗ ನಾನು ಲಂಡನ್ ನಲ್ಲಿ ಇದ್ದೆ. ಏನ್ ಶಿವಳ್ಳಿ ಈಗ ಫೋನ್ ಮಾಡಿದೆ ಅಂತಾ ಕೇಳಿದ್ದಕ್ಕೆ, ಬಿಜೆಪಿ ಅವರು ನನಗೆ 25 ಕೋಟಿ ರೂಪಾಯಿ ಆಫರ್ ನೀಡುತ್ತಿದ್ದಾರೆ. ಏನು ಮಾಡೋದು ಅಂತಾ ಕೇಳಿದ್ದರು.
ನಿಮಗೆ ಆಫರ್ ನೀಡಲು ಬಂದವರ ಮುಖಕ್ಕೆ ಕ್ಯಾಕರಿಸಿ ಉಗಿದು ಹೊರ ಹಾಕ್ರಿ ಅಂತಾ ನಾನು ಹೇಳಿದ್ದೆ ಎಂದು ಮಾಜಿ ಸಿಎಂ ಸಿದ್ದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಕುದುರೆ ವ್ಯಾಪಾರ ನಡೆಯುತ್ತಲೇ ಇರುತ್ತೆ ಅನ್ನೋ ಆರೋಪ ಮಾಡಿದ್ದಾರೆ.