ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಹುಭಾಷಾ ನಟಿ ಶ್ರುತಿ ಹರಿಹರನ್ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಪ್ರಶಾಂತ್ ಸಂಬರ್ಗಿ ನಡುವಿನ ಜಟಾಪಟಿಗೆ ಸಂಬಂಧಿಸಿದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. 8ನೇ ಎಸಿಎಂಎಂ ಕೋರ್ಟ್ ತಡೆ ನೀಡಿ, ಫೆಬ್ರವರಿ 1, 2023ಕ್ಕೆ ವಿಚಾರಣೆ ಮುಂದೂಡಿದೆ.
ವಿಸ್ಮಯ ಚಿತ್ರೀಕರಣ ಸಂದರ್ಭದಲ್ಲಿ ಕೋ ಸ್ಟಾರ್ ಅರ್ಜುನ್ ಸರ್ಜಾ ಅವರು ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ನಟಿ ಶ್ರುತಿ ಹರಿಹರನ್ 2018ರಲ್ಲಿ ಆರೋಪಿಸಿದ್ದರು. ಆಗ ಮೀ ಟೂ ಪ್ರಕರಣಗಳ ಅಬ್ಬರ ಜೋರಾಗಿತ್ತು. ನಟಿಯ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಅರ್ಜುನ್ ಸರ್ಜಾ ಕುಟುಂಬಸ್ಥರು ವಾಗ್ದಾಳಿ ನಡೆಸಿದರು. ಆಗ ಪ್ರಶಾಂತ್ ಸಂಬರ್ಗಿ ಅರ್ಜುನ್ ಸರ್ಜಾ ಪರವಾಗಿ ಮಾತನಾಡಿ ನಟಿಯನ್ನು ಟೀಕಿಸಿದ್ದರು.
ಅಂಬರೀಶ್ ನೇತೃತ್ವದಲ್ಲಿ ಅಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು. ನಂತರ ಪ್ರಕರಣ ತಣ್ಣಗಾಯಿತು. ಆದರೆ, ಪ್ರಶಾಂತ್ ಸಂಬರ್ಗಿ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದರು. ಪ್ರಕರಣ ರದ್ದು ಕೋರಿ ಸಂಬರ್ಗಿ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಇದೀಗ ಕೋರ್ಟ್ ಇದಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿದೆ.