ಪ್ರಜಾಸ್ತ್ರ ಸುದ್ದಿ
ಜಮಖಂಡಿ: ಇತ್ತೀಚೆಗೆ ಬಿಡುಗಡೆಯಾದ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ತಾಲೂಕಿನ ಕಾಜಿಬೆಳಗಿ ಗ್ರಾಮದ ವಿದ್ಯಾರ್ಥಿ ಸಂಜು ಬಿರಾದಾರ ರಾಜ್ಯಕ್ಕೆ 7ನೇ ರ್ಯಾಂಕ್ ಬಂದಿದ್ದಾನೆ. ಆದ್ರೆ, ಈತನ ಮುಂದಿನ ಓದಿಗೆ ಬಡತನ ಅಡ್ಡಿಯಾಗಿದೆ. ಹೀಗಾಗಿ ಇನ್ಫೋಸಿಸ್ ಮುಖ್ಯಸ್ಥರು, ಲೇಖಕಿ, ಸಮಾಜ ಸೇವಕಿಯಾದ ಸುಧಾಮೂರ್ತಿ ಅವರು ನೆರವಿಗೆ ಬಂದಿದ್ದಾರೆ.
ಸುಂಜು ಬಿರಾದಾರನ ಮುಂದಿನ ಮೂರು ವರ್ಷಗಳ ಶೈಕ್ಷಣಿಕ ನೆರವಿಗೆ ವಾರ್ಷಿಕವಾಗಿ 50 ಸಾವಿರ ರೂಪಾಯಿ ನೀಡಲು ಮುಂದಾಗಿದ್ದಾರೆ. ಒಟ್ಟು 1.50 ಲಕ್ಷ ರೂಪಾಯಿ ನೆರವು ಸಿಗಲಿದೆ. ಇದರ ಜೊತೆಗೆ ಇನ್ನಿಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೂ ಸಿದ್ಧರಾಗಿದ್ದಾರೆ.
ಸಂಜು ಈ ಹಿಂದೆ ಓದುತ್ತಿದ್ದ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ವಿಶ್ವಭಾರತಿ ಶಾಲೆಯವರು ಸಹ ವಿದ್ಯಾರ್ಥಿಗೆ ಸಂಪೂರ್ಣ ಉಚಿತ ಶಿಕ್ಷಣ ಕೊಡಲು ಆಸಕ್ತಿ ತೋರಿದ್ದಾರೆ. ಕಡುಬಡತನದ ಪರಿಸ್ಥಿತಿಯಲ್ಲಿಯೂ ಕಷ್ಟ ಪಟ್ಟು ಓದಿ ವಿದ್ಯಾರ್ಥಿ ಸಂಜು 625ಕ್ಕೆ 617 ಅಂಕ ಪಡೆದು 7ನೇ ರ್ಯಾಂಕ್ ಬಂದಿದ್ದಾನೆ. ಇನ್ನು ಸುಧಾಮೂರ್ತಿ ಅವರ ಕಾರ್ಯದ ಬಗ್ಗೆ ಶಿಕ್ಷಣ ಸಚಿವ ಸುರೇಶಕುಮಾರ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.