ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇವತ್ತಿನ ಯುವ ಪೀಳಿಗೆ ರೀಲ್ಸ್ ಅನ್ನೋ ಮಾಯಾಜಾಲಕ್ಕೆ ಸಿಲುಕಿಕೊಂಡು ಬದುಕಿನ ದಾರಿಯನ್ನೇ ತಪ್ಪುತ್ತಿದ್ದಾರೆ. ಕೆಲವರು ಇದನ್ನು ಹಣಗಳಿಸುವ ಮಾರ್ಗಮಾಡಿಕೊಂಡರೆ, ಬಹುತೇಕರು ಇದರ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರ ಗಂಭೀರವಾದ ವಿಷಯವನ್ನು ರೀಲ್ಸ್ ಮೂಲಕ ಪ್ರಚಾರ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಸಂವಿಧಾನ ಜಾಗೃತಿ ಜಾಥಾವನ್ನು ರಾಜ್ಯದ ತುಂಬಾ ನಡೆಸಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ರೀಲ್ಸ್ ಮೂಲಕ ಸಂವಿಧಾನದ ವಿಷಯಗಳನ್ನು ಹೇಳಿ ನಗದು ಬಹುಮಾನ ಗೆಲ್ಲಿ ಎಂದು ಹೇಳಿದೆ. ಹೀಗಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ರೀಲ್ಸ್ ಮಾಡುವ ಶೇಕಡ 99.99ರಷ್ಟು ಜನ ಕಾಮಿಡಿ, ಡ್ಯಾನ್ಸ್, ಫನ್ ಅಥವ ದ್ವಂದಾರ್ಥ ಬರುವ ಅಶ್ಲೀಲ ವಿಡಿಯೋ ಮಾಡುವವರೆ ಹೆಚ್ಚಿದ್ದಾರೆ. ಹೀಗಿರುವಾಗ ಹೆಚ್ಚು ಲೈಕ್, ವೀವ್ ಗಳ ಮೂಲಕ 50 ಸಾವಿರ, 25 ಸಾವಿರ, 15 ಸಾವಿರ ಬಹುಮಾನ ನೀಡುವುದಾದರೆ, ಇದರಿಂದ ನಿಜವಾಗಿಯೂ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಲೋಚನೆಗಳು ತಲುಪುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಓದು, ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ ಎಂದು ಹೇಳಿದ ಅಂಬೇಡ್ಕರ್ ಅವರ ಗಂಭೀರ ವಿಚಾರವನ್ನು ಅಪಹಾಸ್ಯ ಮಾಡಿದರೆ ನಾಳೆ ಸಮಾಜದಲ್ಲಿ ಆಗುವ ಅನಾಹುತಗಳಿಗೆ ಯಾರು ಹೊಣೆ ಎಂದು ಸಾರ್ವಜನಿಕರು ಕೇಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ ಇದಕ್ಕೆ ಏನು ಪ್ರತಿಕ್ರಿಯುಸುತ್ತಾರೆ ಕಾದು ನೋಡಬೇಕು.