ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಧ್ಯ ರಾಜ್ಯದಲ್ಲಿ ಭರ್ಜರಿ ಚರ್ಚೆಯಲ್ಲಿರುವುದು ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಎಂಬಾತನದು. ಪಿಯುಸಿಯನ್ನು ಅರ್ಧಕ್ಕೆ ಬಿಟ್ಟು ಕಾರು ಕಳ್ಳತನ ಮಾಡಿಕೊಂಡಿದ್ದಾತ ಪಿಂಪ್ ಕೆಲಸ ಮಾಡುತ್ತಾ ಮಾಡುತ್ತಾ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸ್ನೇಹ ಬೆಳೆಸಿದ.
ಮಂಡ್ಯ ಮೂಲದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಮೈಸೂರಿಗೆ ಹೋಗಿ ವೇಶ್ಯೆವಾಟಿಕೆ ದಂಧೆ ಶುರು ಮಾಡಿದ. ಸ್ಯಾಂಟ್ರೋ ಕಾರಿನಲ್ಲಿ ಹುಡುಗಿಯರನ್ನು ಪೂರೈಕೆ ಮಾಡುತ್ತಿದ್ದ ಕಾರಣಕ್ಕೆ ಇತನಿಗೆ ಸ್ಯಾಂಟ್ರೋ ರವಿ ಅನ್ನೋ ಹೆಸರು ಬಂತು. ಕಾರು ಕಳ್ಳತನ ಸೇರಿ ಬೇರೆ ಬೇರೆ ಪ್ರಕರಣದಲ್ಲಿ ಜೈಲು ರುಚಿ ಸಹ ನೋಡಿ ಬಂದಿದ್ದಾನೆ. ಈ ಮಟ್ಟಕ್ಕೆ ಈತ ಬೆಳೆಯಲು ಪರೋಕ್ಷವಾಗಿ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಕಾರಣ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರ ಕೆಡವಲು ಮುಂಬೈಗೆ ಹೋದ ಅಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಜೊತೆ 12 ಹುಡುಗಿಯರನ್ನು ಸ್ಯಾಂಟ್ರೋ ರವಿ ಕಳುಹಿಸಿದ್ದ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸಾಕಷ್ಟು ರಾಜಕೀಯ ಪ್ರಭಾವ ಬೆಳೆಸಿಕೊಂಡಿದ್ದ ಈತ ವರ್ಗಾವಣೆ ದಂಧೆಯನ್ನು ನಡೆಸಿ ಲಕ್ಷ ಲಕ್ಷ ಸಂಪಾದಿಸಲು ಶುರು ಮಾಡಿದ. ಇನ್ಸ್ ಪೆಕ್ಟರ್, ಎಸಿಪಿ, ಡಿವೈಎಸ್ಪಿ ಗಳಿಗೆ ವರ್ಗಾವಣೆ, ಪ್ರಮೋಷನ್ ಮಾಸ್ಟರ್ ಮೈಂಡ್ ನಂತೆ. ಗೃಹ ಇಲಾಖೆ ಅಧಿಕೃತ ನಿವಾಸವಾದ ಕುಮಾರಕೃಪವೇ ಇತನ ವರ್ಗಾವಣೆಯ ಅಡ್ಡೆಯಾಗಿತ್ತು ಅನ್ನೋದು ನಿಜಕ್ಕೂ ದುರಂತ.
ಬೆಂಗಳೂರು, ಮೈಸೂರಿನಲ್ಲಿ ಹಲವು ಐಷಾರಾಮಿ ಮನೆಗಳನ್ನು ಕಟ್ಟಿದ್ದಾನೆ. ಬೇಕಾದಷ್ಟು ಆಸ್ತಿ ಮಾಡಿದ್ದಾನೆ. ಸಖತ್ ಟಿಪ್ ಟಾಪ್ ಆಗಿ ಕಾಣುತ್ತಿರುವ ಮಹಾನ್ ಕಿರಾತಕನ ವಿರುದ್ಧ ಮೈಸೂರಿನ ಹುಡುಗಿಯೊಬ್ಬಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಅವನನ್ನು ಈ ಮಟ್ಟಕ್ಕೆ ಬೆಳೆಸಿ ಈಗ ರಾಜಕೀಯ ಕೆಸರೆರಚಾಟ ಮಾಡುತ್ತಿರುವವರ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.