ಪ್ರಜಾಸ್ತ್ರ ಸುದ್ದಿ
ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮದ ಇಂದಿರಾ ನಗರದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಎರಡು ತಿಂಗಳಿಂದ ದುರಸ್ಥಿ ಕಾರಣಕ್ಕೆ ಬಂದ್ ಆಗಿದೆ. ಹೀಗಿದ್ರೂ, ಅದನ್ನ ದುರಸ್ಥಿಗೊಳಿಸುವ ಕೆಲಸವಾಗಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವುದ್ರಿಂದ ಶಾಸಕರು ಬೋರ್ ವೆಲ್ ಕೊರೆಯಿಸಿದ್ರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಗ್ರಾಮದ ಖಾಸಗಿ ವ್ಯಕ್ತಿಯಿಂದ ನೀರನ್ನ ಪಡೆದು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಆದ್ರೆ, ಹಲವು ಕಾರಣಗಳಿಂದ ಬಂದ್ ಆಗಿದೆ. ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಮಾಡಲು ಸಿದ್ದವಿದ್ದರೂ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ.
ಇವರ ಗುತ್ತಿಗೆ ಪಟ್ಟಿಯಲ್ಲಿರುವ 3 ಕ್ಕೂ ಹೆಚ್ಚು ಶುದ್ದ ನೀರಿನ ಘಟಗಳಲ್ಲಿ ಗ್ರಾಮ ಪಂಚಾಯತಿ ಹತ್ತಿರವಿರುವ ಒಂದು ಶುದ್ಧ ಕುಡಿಯುವ ನೀರಿನ ಘಟಕ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಉಳಿದ ಶುದ್ಧೀಕರಣ ಘಟಕಗಳು ಸ್ಥಗಿತವಾಗಿದ್ದರಿಂದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿ ಪಂಚಾಳ ಅವರಿಗೆ ಕರೆ ಮಾಡಿದರೆ ದೂರವಾಣಿ ಸ್ವೀಕರಿಸುತ್ತಿಲ್ಲವೆಂದು ಗ್ರಾಮಸ್ಥರು ಗೋಳು ಹೇಳಿಕೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆ ಬಗೆಹರಿಸಬೇಕಿದೆ.