ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ರಂಗಭೂಮಿ ನಿರ್ದೇಶಕ, ಕಲಾವಿದ, ಪತ್ರಕರ್ತ ಯಶವಂತ ಕಾರ್ಗಳ್ಳಿ ಅವರು ಸೇವಾ ಭೂಷಣ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿಕೊಂಡು ಬರಲಾಗುತ್ತಿದೆ. ಅದೆ ರೀತಿ ಯಶವಂತ ಕಾರ್ಗಳ್ಳಿ ಅವರ ಸಾಧನೆ ಗುರುತಿಸಿ 2020-21ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಹೆಚ್.ಎಲ್ ಯಮುನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶವಂತ ಕಾರ್ಗಳ್ಳಿ ಕಿರುಪರಿಚಯ:
ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಕಾರ್ಗಳ್ಳಿ ಗ್ರಾಮದವರು. ಮೈಸೂರು ವಿವಿಯಲ್ಲಿ ಮಲ್ಟಿ ಮೀಡಿಯಾ ಅಧ್ಯಯನ ಮಾಡಿ, ಮೈಸೂರು ರಂಗಾಯಣದಲ್ಲಿ ರಂಗ ಶಿಕ್ಷಣ ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ. ರಂಗಭೂಮಿಯ ಖ್ಯಾತ ನಿರ್ದೇಶಕರಾದ ಚಿದಂಬರಾವ್ ಜಂಬೆ, ಸಿ.ಬಸವಲಿಂಗಯ್ಯ, ಲಿಂಗದೇವರು ಹಳೆಮನೆ, ಜನ್ನಿ, ಮಂಡ್ಯ ರಮೇಶ, ಮಂಜುನಾಥ ಬೆಳೆಕೆರೆ, ಕೆ.ಆರ್ ಸುಮತಿ ಸೇರಿದಂತೆ ಅನೇಕರ ಜೊತೆ ಕೆಲಸ ಮಾಡಿದ್ದಾರೆ.
ಕಾಡುಕೋಳಿ, ಜೋಡಿ ನವಿಲು, ರಾಮ ರಾವಣರ ಯುದ್ಧ, ಬಿರುದೆಂತೆಂಬರ ಗಂಡ, ಈ ಕೆಳಗಿನವರು, ಧನ್ವಂತರಿ ಚಿಕಿತ್ಸೆ, ನಾವೇನ್ ಸತ್ತೇವೆನ್, ಈರುಳ್ಳಿ ಪುರಾಣ, ಸೈಕಲ್ ಡ್ರೀಮ್ಸ್ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಒಂದು ತೋಪಿನಲ್ಲಿ, ಮಂತ್ರದ ಹೂವುಗಳು, ಉರಿಯೋ ಉಯ್ಯಾಲೆ, ಇತಿ ನಿನ್ನ ಅಮೃತ, ಮಾದರಿ ಮಾದಯ್ಯ, ಸೈಕಲ್ ಡ್ರೀಮ್ಸ್, ಅಯಾಸಿಸ್, ರಶೋಮನ್ ಸೇರಿ ಹಲವು ನಾಟಕಗಳನ್ನ ನಿರ್ದೇಶನ ಮಾಡಿದ್ದಾರೆ. ಇದು ಅಲ್ಲದೆ ರಂಗ ವಿನ್ಯಾಸಕರಾಗಿ, ಪೋಸ್ಟರ್ ಡಿಸೈನರ್ ಆಗಿ ಸಹ ಕೆಲಸ ಮಾಡಿಕೊಂಡು ಬರ್ತಿರುವ ಬಹುಮುಖ ಪ್ರತಿಭೆ.