ಪ್ರಜಾಸ್ತ್ರ ಸುದ್ದಿ
ಮೈಸೂರು: ದಸರಾ ಉತ್ಸವದ ಹಿನ್ನೆಲೆಯಲ್ಲಿ ಹಲವು ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಕವಿಗೋಷ್ಠಿ ಸಹ ನಡೆಸಲಾಗುತ್ತೆ. ಹೀಗೆ ನಡೆಸುವ ಕವಿಗೋಷ್ಠಿಗೆ ಸಂಬಂಧಿಸಿದಂತೆ ಆರಂಭದಲ್ಲಿ ಹಲವು ಯಡವಟ್ಟುಗಳನ್ನು ಮಾಡಲಾಗಿದೆ.
ಪ್ರಧಾನ ಕವಿಗೋಷ್ಠಿಯಲ್ಲಿ ಮೂರು ವರ್ಷಗಳ ಹಿಂದೆ ಮೃತಪಟ್ಟಿರುವ ಹಿರಿಯ ಕವಿ ಜಿ.ಕೆ ರವೀಂದ್ರಕುಮಾರ್ ಅವರ ಹೆಸರನ್ನು ಮುದ್ರಿಸಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಈ ಹೆಸರು ನೋಡಿದವರಿಗೆ ಅಚ್ಚರಿಯಾಗಿದೆ. ಹೀಗಾಗಿ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇನ್ನೊಂದು ಕಡೆ ಕವಿಗಳಿಗೆ ಗೋಷ್ಠಿಯ ಬಗ್ಗೆ ತಿಳಿಸದೆ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಈ ಬಗ್ಗೆ ಹಿರಿಯ ಕವಿ ಸತ್ಯಾನಂದ ಪಾತ್ರೋಟ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಒಪ್ಪಿಗೆ ಇಲ್ಲದೆ ಅದ್ಹೇಗೆ ನನ್ನ ಹೆಸರು ಈ ಗೋಷ್ಠಿಗೆ ಸೇರಿಸಿದರು? ಆಯೋಜಕರೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ. ಅಲ್ಲದೇ ಪ್ರಧಾನ ಕವಿಗೋಷ್ಠಿಗೆ ಮೂರು ಬಾರಿ ಭಾಗವಹಿಸಿದ್ದೇನೆ. ಒಮ್ಮೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. ಭಾಗವಹಿಸಿದವರನ್ನೇ ಪದೆಪದೆ ಆಹ್ವಾನಿಸುವುದಕ್ಕಿಂತ ಹೊಸಬರಿಗೆ ಅವಕಾಶ ನೀಡುವುದು ಸೂಕ್ತ ಎಂದಿದ್ದಾರೆ.
ಇನ್ನು ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ್ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರು ಎಂದು ಮುದ್ರಿಸಿದ್ದಾರೆ. ಹೀಗೆ ಒಟ್ಟಿನಲ್ಲಿ ಹತ್ತು ಹಲವು ಯಡವಟ್ಟುಗಳನ್ನು ಮಾಡಿಕೊಂಡಿದ್ದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.