ಪ್ರಜಾಸ್ತ್ರ ಸುದ್ದಿ
ಗಂಗಾವತಿ: ಗಣಿದಣಿ ಜನಾರ್ಧನ್ ರೆಡ್ಡಿ ಜೈಲು ಪಾಲಾದ ಮೇಲೆ ಬಿಜೆಪಿಯಿಂದ ದೂರಾದರು. ಹೊರ ಬಂದ ಮೇಲೂ ಕಮಲ ಪಾಳೆಯದಲ್ಲಿ ಕಾಣಿಸಿಕೊಳ್ಳಲಿಲ್ಲ. ರಾಜಕೀಯದಿಂದಲೇ ಹಿಂದೆ ಸರಿದರೂ ಎಂದು ಹೇಳಲಾಯಿತು. ಆದರೆ, ಅವರು ಶೀಘ್ರದಲ್ಲಿ ಜನರಿಗೆ ಸಿಹಿ ಸುದ್ದಿ ನೀಡುತ್ತೇನೆ ಎಂದಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಇರಲು ಗಂಗಾವತಿಗೆ ಬಂದಿದ್ದೇನೆ. 10 ವರ್ಷದ ಬಳಿಕ ಸುಪ್ರೀಂ ಕೋರ್ಟ್ ನನಗೆ ಅವಕಾಶ ಕೊಟ್ಟಿದೆ. ನಾನು ಹುಟ್ಟಿ ಬೆಳೆದಿದ್ದು ಬಳ್ಳಾರಿಯಲ್ಲಿ. ಆದರೆ, ಶಕ್ತಿ ಕೊಟ್ಟಿದ್ದು ಇಲ್ಲಿ. ನಾನು ಪ್ರತಿ ಬಾರಿ ಬೆಂಗಳೂರಿಗೆ ಹೋಗಲು ಆಗಲ್ಲ. ಇನ್ನು 10 ದಿನದಲ್ಲಿ ಇಲ್ಲಿ ಮನೆ ಗೃಹ ಪ್ರವೇಶ ಮಾಡುತ್ತೇನೆ. ಆದಷ್ಟು ಬೇಗ ಜನರಿಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದಾರೆ.
ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರ ಹೇಳಿಕೆ, ಹೊಸ ಪಕ್ಷದ ಉದಯವೆಂದು ಹೇಳಲಾಗುತ್ತಿದೆ. ಯಾಕಂದರೆ, ಇವರ ಆಪ್ತ ಸಚಿವ ಬಿ.ಶ್ರೀರಾಮುಲು ಸಹ, ಅವರನ್ನು ಮತ್ತೆ ಬಿಜೆಪಿಗೆ ಕರೆದುಕೊಂಡು ಬರುತ್ತೇನೆ. ಹೈಕಮಾಂಡ್ ಜೊತೆಗೆ ಮಾತನಾಡುತ್ತೇನೆ ಎಂದಿರುವುದು ನೋಡಿದರೆ, ಬಿಜೆಪಿ ವಿರುದ್ಧ ಮುನಿಸಿಕೊಂಡಿರುವುದು ನಿಜವಾಗುತ್ತೆ. ಹೀಗಾಗಿ ರೆಡ್ಡಿ ಹೊಸ ಪಕ್ಷದ ಚರ್ಚೆ ಶುರುವಾಗಿದೆ.