ಪ್ರಜಾಸ್ತ್ರ ಅಪರಾಧ ಸುದ್ದಿ
ತುಮಕೂರು: ಕಳೆದ ಫೆಬ್ರವರಿ 3ರಂದು ಬರ್ತ್ ಡೇ ಆಚರಿಸಿಕೊಂಡು ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯ ಮಂಜುನಾಥ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಪತ್ನಿ ಸೇರಿ 7 ಜನರನ್ನು ಬಂಧಿಸಿದ್ದಾರೆ.
ಕೊಲೆಯಾದ ಮಂಜುನಾಥ್ ಅಡುಗೆ ಕಾಂಟ್ರಾಕ್ಟರ್ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಒಳ್ಳೆಯ ಸಂಪಾದನೆಯಿತ್ತು. ಕಳೆದ ಐದಾರು ವರ್ಷಗಳ ಹಿಂದೆ ತಂದೆ, ತಾಯಿ ತೀರಿಕೊಂಡಿದ್ದರು. ಕಳೆದ 11 ತಿಂಗಳ ಹಿಂದೆ ಹರ್ಷಿತಾ ಎಂಬಾಕೆಯನ್ನು ಮದುವೆಯಾಗಿ ಅಜ್ಜಿಯ ಜೊತೆಗೆ ವಾಸವಾಗಿದ್ದ. ಆದರೆ, ಹರ್ಷಿತಾ ದೊಡ್ಡಮ್ಮನ ಮಗ ರಘು ಎಂಬಾತನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ಗಂಡನನ್ನು ಕೊಲೆ ಮಾಡಿದರೆ ತಾವು ಆರಾಮಾಗಿ ಇರಬಹುದು ಎಂದು ಪ್ಲಾನ್ ಮಾಡಿದ್ದಾಳೆ. ಇದಕ್ಕಾಗಿ ಸ್ನ್ಯಾಪ್ ಚಾಟ್, ಟೆಲಿಗ್ರಾಮ್, ಟ್ವೀಟರ್ ಆಪ್ ಬಳಸಿದ್ದಾರೆ. ಸ್ನ್ಯಾಪ್ ಚಾಟ್ ನಲ್ಲಿ 6+1 ಎಂದು ಗ್ರೂಪ್ ಮಾಡಿದ್ದರು. ಅಂದು ಇವರೆಲ್ಲ ಸೇರಿ ಮನೆಗೆ ಬಂದು ಮಲಗಿದ್ದ ಗಂಡನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮಂಜುನಾಥ್ ಪ್ಯಾಂಟ್ ನಲ್ಲಿ ಗಾಂಜಾ ತುಂಬಿ ಕಿತ್ತನಾಗಮಂಗಲ ಕೆರೆ ಹೆಣ ಎಸೆದು ಎಸ್ಕೇಪ್ ಆಗಿದ್ದಾರೆ.
ಮುಂಜಾನೆ ಗಂಡನಿಗೆ ಮೆಸೇಜ್ ಮಾಡಿದ್ದಾಳೆ. ಎಲ್ಲಿದ್ದೀರಿ, ಕಾಲ್ ಮಾಡಿ ಎಂದಿದ್ದಾಳೆ. ನಂತರ ಅಕ್ಕಪಕ್ಕದವರಿಗೆ, ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಿದಂತೆ ನಾಟಕವಾಡಿದ್ದಾಳೆ. ಪೊಲೀಸ್ ಠಾಣೆಗೆ ಬಂದಾಗಲೂ ತಮಗೇನೂ ಗೊತ್ತಿಲ್ಲದಂತೆ ನಡೆದುಕೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಮಂಜುನಾಥ್ ಮೊಬೈಲ್ ನಲ್ಲಿ ಎಚ್ ಆರ್ ಎಂದು ಕೈ ಮೇಲೆ ಪೆನ್ನಿನಲ್ಲಿ ಬರೆದುಕೊಂಡ ಹರ್ಷಿತಾ ರಘುಗೆ ಕಳುಹಿಸಿದ ಫೋಟೋ ಪತ್ತೆಯಾಗಿದೆ. ಇದರ ಜಾಡು ಹಿಡಿದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ವಂಚಕಿ ಹರ್ಷಿತಾ, ಆಕೆಯ ಪ್ರಿಯಕರ ರಘು ಸೇರಿ 7 ಜನರನ್ನು ಕುಣಿಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.