ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿಗಳು ಮಾಡ್ತಿರುವ ಕಾರ್ಯವೊಂದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಡಿ ಬಾಸ್ ಅಭಿಮಾನಿಗಳು ಅವರ ಹುಟ್ಟು ಹಬ್ಬವನ್ನ ತುಂಬಾ ಅದ್ಧೂರಿಯಾಗಿ ಮಾಡ್ತಾರೆ. ಈ ಬಾರಿ ಅದಕ್ಕೆ ಬ್ರೇಕ್ ಹಾಕಲಾಗಿದೆ. ಕಾರಣ, ನಟ ದರ್ಶನ ಅಭಿಮಾನಿಯ ಸ್ಥಿತಿ.
ಹೌದು, ದೇವನಹಳ್ಳಿ ಸಮೀಪದ ದೊಡ್ಡಸನ್ನೇ ಗ್ರಾಮದ ನಿವಾಸಿಯಾಗಿರುವ ಎಸ್.ಚೈತನ್ಯ ಅನ್ನೋ ಯುವತಿ ದರ್ಶನ ಅಭಿಮಾನಿಯಾಗಿದ್ದಾಳೆ. ಬಿ.ಕಾಂ ಓದುತ್ತಿರುವ ಯುವತಿ ಜನವರಿ 3ರಂದು ಕುಸಿದು ಬಿದ್ದಿದ್ದಾಳೆ. ಯಾಕಂದ್ರೆ, ಆಕೆ ಬ್ರೈನ್ ಟ್ಯೂಮರ್ ಗೆ ತುತ್ತಾಗಿದ್ದು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಚೈತನ್ಯಳ ತಂದೆ ವಾಟರ್ ಟ್ಯಾಂಕರ್ ನಿಂದ ನೀರು ಸರಬರಾಜು ಮಾಡುವ ಕೆಲಸ ಮಾಡ್ತಿದ್ದಾರೆ. ಇಂಥಾ ಸ್ಥಿತಿಯಲ್ಲಿ ಮಗಳಿಗಾಗಿ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದ್ರೂ ಇನ್ನು ಚೇತರಿಸಿಕೊಂಡಿಲ್ಲ. ಚೈತನ್ಯ ಕೋಮಾ ಸ್ಥಿತಿಯಲ್ಲಿದ್ದು ಚಿಕಿತ್ಸಗೆ 25 ಲಕ್ಷ ರೂಪಾಯಿ ಬೇಕಾಗಿದೆ. ಇದಕ್ಕೆ ದರ್ಶನ ಅಭಿಮಾನಿಗಳು ಮುಂದೆ ಬಂದಿದ್ದು, ಈ ಬಾರಿ ತಮ್ಮ ನೆಚ್ಚಿನ ಹುಟ್ಟು ಹಬ್ಬಕ್ಕೆ ಖರ್ಚು ಮಾಡಲು ರೆಡಿ ಮಾಡಿಕೊಂಡಿದ್ದ ಹಣವನ್ನ ಚೈತನ್ಯಳ ಚಿಕಿತ್ಸಗೆ ಕೊಡಲು ಮುಂದೆ ಬಂದಿದ್ದಾರೆ. ಅಲ್ದೇ, ಫೆಬ್ರವರಿ 16ರಂದು ದರ್ಶನ ಸಹ ತಮ್ಮ ಹುಟ್ಟು ಹಬ್ಬವನ್ನ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.