ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ತಡರಾತ್ರಿಯವರೆಗೂ ಪಬ್ ನಲ್ಲಿ ಪಾರ್ಟಿ ಮಾಡಿದ್ದಾರೆ ಎನ್ನುವ ಪ್ರಕರಣ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿ 8 ಜನರ ವಿರುದ್ಧ ದೂರು ನೀಡಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ಇಂದು ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿ 8 ಜನರ ವಿಚಾರಣೆಗೆ ಹಾಜರಾದರು.
ನಟರಾದ ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್ ಸೇರಿ 8 ಜನರು ವಿಚಾರಣೆಗೆ ಹಾಜರಾದರು. ನಿರ್ದೇಶಕ ತರುಣ್ ಸುಧೀರ್, ನಟ ದರ್ಶನ್ ಚಿತ್ರದ ಪ್ರಚಾರವಾಗಿ ದುಬೈಗೆ ತೆರೆಳಿದ್ದರು. ಹೀಗಾಗಿ ಅವರು ಬಂದ ಮೇಲೆ ಎಲ್ಲರೂ ಇಂದು ಒಟ್ಟಿಗೆ ವಿಚಾರಣೆಗೆ ಹಾಜರಾದರು.
ಜನವರಿ 3ರ ರಾತ್ರಿ ಸಿನಿಮಾ ಯಶಸ್ಸಿನ ಪಾರ್ಟಿಯನ್ನು ಓರಾಯನ್ ಮಾಲ್ ನಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಆಯೋಜಿಸಲಾಗಿತ್ತು. ಪಾರ್ಟಿಗೆ ರಾತ್ರಿ 1 ಗಂಟೆಯ ತನಕ ಮಾತ್ರ ಅವಕಾಶವಿದೆ. ಈ ನಿಯಮ ಮೀರಿ ಜನವರಿ 4ರ ಮುಂಜಾನೆ 3.30ರ ತನಕ ಪಾರ್ಟಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೇಸ್ ದಾಖಲಾಗಿದೆ. ಈ ವೇಳೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾಟೇರ ಸಿನಿಮಾ ಯಶಸ್ವಿಯಾಗಿದ್ದಕ್ಕೆ ನಟ ದರ್ಶನ್ ಟಾರ್ಗೆಟ್ ಮಾಡಿ ಮಸಿ ಬಳಿಯುವ ಯತ್ನ ನಡೆದಿದೆ. ಇದರ ಹಿಂದೆ ಷಡ್ಯಂತ್ರವಿದೆ ಅಂತಾ ಆರೋಪಿಸಿದರು.