ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪಿಂಚಣಿಗಾಗಿ ಅನುದಾನಿತ ಶಾಲಾ ಶಿಕ್ಷಕರು ಕಳೆದ 141 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ. ಈಗಾಗ್ಲೇ ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದನ್ನು ಸರ್ಕಾರದ ಕೊಲೆ ಎನ್ನದೆ ಬೇರೆ ಏನು ಹೇಳಬೇಕು. ಸರ್ಕಾರಕ್ಕೆ ಕನಿಷ್ಠ ಜ್ಞಾನವಾದರೂ ಇದ್ಯಾ ಎಂದು ವಾಗ್ದಾಳಿ ನಡೆಸಿದರು.
ಫ್ರೀಡಂ ಪಾರ್ಕ್ ನಲ್ಲಿ 141 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರಿಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕನ್ನು. ಸಿಎಂ ಬಸವರಾಜ ಬೊಮ್ಮಾಯಿ ಕಣ್ಣು ಬಿಡಲು ಇನ್ನೆಷ್ಟು ಹೆಣ ಬೀಳಬೇಕು ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಕೋಮು ಗಲಬೆಯಾದರೆ ಹೆಣದ ಸುತ್ತ ನೊಣದಂತೆ ಹೋಗುವ ಬಿಜೆಪಿ ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವ ಅಮೂಲ್ಯ ಎನಿಸುವುದಿಲ್ಲವೆ? ಮುಷ್ಕರದಲ್ಲಿ ಭಾಗವಹಿಸುವವರನ್ನು ಕರೆದು ಮಾತುಕತೆ ನಡೆಸಿ ತಕ್ಷಣ ಅವರ ಬೇಡಿಕೆ ಈಡೇರಿಸಬೇಕು. ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.