ಪ್ರಜಾಸ್ತ್ರ ಡೆಸ್ಕ್
ಬೆಂಗಳೂರು: ರಾಜ್ಯದಲ್ಲಿ ಒಂದಾದ ನಂತರ ಒಂದು ವಿವಾದ ಉಂಟು ಮಾಡುವ ಘಟನೆಗಳು ನಡೆಯುತ್ತಿವೆಯಾ ಅಥವ ಸೃಷ್ಟಿಸಲಾಗುತ್ತಿದೆಯಾ ಅನ್ನೋ ಪ್ರಶ್ನೆ ಮೂಡಿದೆ. ಹಿಜಾಬ್ ಗಲಾಟೆ, ಭಜರಂಗದಳ ಕಾರ್ಯಕರ್ತನ ಹತ್ಯೆ ಘಟನೆ, ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡದವರು ದೇಶ ದ್ರೋಹಿಗಳು ಎಂದ ಶಾಸಕ ಎಂ.ಪಿ ರೇಣುಕಾಚಾರ್ಯರ ಮಾತುಗಳು..
ಸಮಾಜದಲ್ಲಿ ಶಾಂತಿ ಕಾಪಾಡುವುದು, ಕೋಮುಸೌಹಾರ್ದತೆ ಬೆಳೆಸುವ ಕೆಲಸ ಮಾಡಬೇಕಾದ ಸರ್ಕಾರ ಅದನ್ನು ಕದಡುವ ಯತ್ನ ನಡೆಸಿದೆ ಅನ್ನೋ ಕೂಗು ಎದ್ದಿದೆ. ಇದೀಗ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ತರುವ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಗುಜರಾತಿನಲ್ಲಿ ಭಗವದ್ಗೀತೆ ಅಳವಡಿಸಲಾಗಿದೆ. ರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಲಾಗುವುದು ಎಂದಿದ್ದಾರೆ. ಇದಕ್ಕೆ ಬಿಜೆಪಿ ಸಚಿವರು, ಶಾಸಕರು, ಸಂಸದರು ದನಿಗೂಡಿಸಿದ್ದಾರೆ. ಶೈಕ್ಷಣಿಕ ಕೇಂದ್ರದಿಂದ ಧರ್ಮ, ಜಾತಿ, ಮತ ಪಂಥಗಳನ್ನು ದೂರ ಇಡಬೇಕಾದ ಸರ್ಕಾರ ಅದನ್ನು ಶಾಲಾ, ಕಾಲೇಜು ಆವರಣಕ್ಕೆ ತರುವ ಯತ್ನ ನಡೆಸಿದೆ. ಭಾವನಾತ್ಮಕ ವಿಚಾರದಿಂದ ಯುವ ಮನಸ್ಸುಗಳನ್ನು ಕೆಡಿಸುವ ಕೆಲಸಕ್ಕೆ ಕೈ ಹಾಕಿರುವುದು ನಿಜಕ್ಕೂ ಅಪಾಯದ ಸಂಗತಿ.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸಹ ವಾಗ್ದಾಳಿ ನಡೆಸಿದ್ದಾರೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಅಶಾಂತಿ ಉಂಟು ಮಾಡುವ ಕೆಲಸಕ್ಕೆ ಮುಂದಾಗಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದ್ದು ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.