ಪ್ರಜಾಸ್ತ್ರ ಸುದ್ದಿ
ಸಿಂದಗಿ: ನನ್ನ ಮುಖ ನೋಡಿ ಯಾರು ಮತ ಹಾಕುತ್ತಾರೆ. ಮೋದಿ ಮುಖ ನೋಡಿ ಮತ ಹಾಕುತ್ತಾರೆ ಎನ್ನುವ ಮೂಲಕ ರಮೇಶ ಜಿಗಜಿಣಗಿಯವರು ದಲಿತರ ಸ್ವಾಭಿಮಾನ ಕೆಣಕಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಾಜಶೇಖರ ಕೂಚಬಾಳ ಹೇಳಿದ್ದಾರೆ.
ಬುಧವಾರ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 30 ವರ್ಷಗಳ ಕಾಲ ಸಂಸತ್ತಿನಲ್ಲಿದ್ದವರು. ಮೋದಿಗಿಂತ 15 ವರ್ಷ ಮೊದಲು ಸಂಸತ್ತಿನಲ್ಲಿದ್ದವರು. ನಾನು ಪ್ರಧಾನಿ ಅಭ್ಯರ್ಥಿ ಎಂದಿದ್ದರೆ ಹೆಮ್ಮೆ ಪಡಬಹುದಿತ್ತು. ಆದರೆ, ನನ್ನ ಮುಖ ನೋಡಿ ಯಾರು ಮತ ಹಾಕುತ್ತಾರೆ ಎನ್ನುವುದು ಬಾಲಿಶವಾದದ್ದು ಎಂದು ಕಿಡಿ ಕಾರಿದರು.
ಮಲ್ಲಿಕಾರ್ಜುನ ಖರ್ಗೆ, ರಮೇಶ ಜಿಗಜಿಣಗಿಯವರು ನಮ್ಮ ಈ ಭಾಗದ ಎರಡು ಕಣ್ಣುಗಳೆಂದು ತಿಳಿದಿದ್ದೇವೆ. ಆದರೆ, ಅವರ ಹೇಳಿಕೆ ಶೋಭೆ ತರುವಂತದ್ದಲ್ಲ. ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಕೇಳದ ಜಿಗಜಿಣಗಿಯವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಸಾಧನೆ ಕೇಳುತ್ತಾರೆ. ಈ ಭಾಗದ ದಲಿತರಲ್ಲಿ ಜಾಗೃತಿ ಮೂಡಿಸಿದವರು. ಸಮಗ್ರ ಏಳ್ಗೆಗಾಗಿ ಕೆಲಸ ಮಾಡಿದ್ದಾರೆ. ಎಲ್ಲರನ್ನು ಸಮನ್ವಯದಿಂದ ತೆಗೆದುಕೊಂಡು ಹೋಗುತ್ತಾರೆ. ಇನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪೂರ ಎಸ್ಸಿ, ಎಸ್ಟಿ ಉಪ ಸಮಿತಿ ಸದಸ್ಯರಾಗಿ ಏನು ಕೆಲಸ ಮಾಡಿದ್ದೀರಿ. ನಿಮ್ಮ ಕಣ್ಣಿಗೆ ಬುದ್ಧ ವಿಹಾರ ಕಾಣಿಸುತ್ತಿಲ್ಲವೇ? ದಲಿತರಿಗೆ ಪ್ರಚೋದನೆ ನೀಡಿದ್ದು ನೋವಿನ ಸಂಗತಿ ಎಂದರು.
ಬಿಜೆಪಿಯವರು 400 ಸ್ಥಾನ ಪಡೆದರೆ ಸಂವಿಧಾನದ ಪ್ರಮುಖ ಅಂಶಗಳನ್ನು ಬದಲು ಮಾಡುತ್ತಾರೆ. ಹೀಗಾಗಿ ತಳಸಮುದಾಯದವರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದರೆ ಹೋದರೆ ಪ್ರಜಾಪ್ರಭುತ್ವ ಸತ್ತು ಹೋಗುತ್ತದೆ. ಆದ್ದರಿಂದ ಅಭಿವೃದ್ಧಿಯ ಕನಸು ಹೊಂದಿದವರನ್ನು ತಳಸಮುದಾಯದವರು ಬೆಂಬಲಿಸಬೇಕು ಅಂತಾ ಹೇಳಿದರು.
ಈ ವೇಳೆ ಶ್ರೀಶೈಲ ಜಾಲವಾದಿ, ಅಯ್ಯಪ್ಪ ಕಟ್ಟಿಮನಿ, ಧರ್ಮಣ್ಣ ಯಂಟಮಾನ, ಸಾಯಬಣ್ಣ ಪುರದಾಳ, ಸಂತೋಷ ಜಾದವ, ಅಂಬರೀಶ ಚೌಗಲೆ, ತಿರುಪತಿ ಬಂಡಿವಡ್ಡರ, ದಲೀಪ ಚೌವ್ಹಾಣ ಸೇರಿ ಇತರರು ಉಪಸ್ಥಿತರಿದ್ದರು.