ಮಳವಳ್ಳಿ: ಕರೋನಾ ಸೋಂಕು ನಿವಾರಣೆಗಾಗಿ ಸೋಕು ನಿವಾರಕ ಸಿಂಪಡಿಸುತ್ತಿದ್ದ ಪೌರಕಾರ್ಮಿಕನೊಬ್ಬ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮ ಪಂಚಾಯಿತಿಯ ಪೌರಕಾರ್ಮಿಕ 45 ವರ್ಷದ ಬಸವರಾಜು ಮೃತಪಟ್ಟ ದುರ್ದೈವಿ. ಈ ಮೂಲಕ ರಾಜ್ಯದಲ್ಲಿ ಮೊದಲ ಕರೋನಾ ವಾರಿಯರ್ ಸಾವು ಆಗಿದೆ.
ಕಳೆದೊಂದು ವಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿದ್ದ. ವೈರಾಣು ನಾಶಕ ಶ್ವಾಸಕೋಶಕ್ಕೆ ತಗುಲಿ ಬಸವರಾಜು ತೀವ್ರ ಅಸ್ವಸ್ಥಗೊಂಡು ಏಪ್ರಿಲ್ 20 ರಂದು ಮಂಡ್ಯ ಮಿಮ್ಸ್ ಗೆ ಕಳುಹಿಸಲಾಗಿದೆ. ಆದ್ರೆ, ವಿಮ್ಸ್ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿರುವುದ್ರಿಂದ, ಕಲ್ಕುಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೆ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ.
ಬಳಿಕ ಬಸವರಾಜು ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಎಪ್ರಿಲ್ 21ರಂದು ಮಿಮ್ಸ್ ಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗಿದೆ ಮಂಗಳವಾರ ಮಧ್ಯರಾತ್ರಿ ಬುಧುವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಮೃತರ ಪತ್ನಿ ರಾಜೇಶ್ವರಿ ದೂರು ನೀಡಿದ್ದಾರೆ.
ಕೋವಿಡ್ ನಿಯಮಾನುಸರ ಪೌರಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದ್ದಾರೆ. ಕರೋನಾ ಹೋರಾಟದಲ್ಲಿ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ. ಪ್ರಾಂತ ರೈತ ಸಂಘದ ಟಿ.ಯಶವಂತ ಸೇರಿದಂತೆ ಮೊದಲಾದವರು ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.