ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕ್ರಿಯೇಟಿವ್ ಕಿಡ್ಸ್ ಹೋಮ್ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು. ಪಟ್ಟಣದ ಮಾಂಗಲ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಣ್ಣರು ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಪಾಲಕರು, ಪ್ರೇಕ್ಷಕರನ್ನು ರಂಜಿಸಿದರು.
ನಾಡು, ನುಡಿ, ಗುರು, ಭಕ್ತಿ ಭಾವಕ್ಕೆ ಸಂಬಂಧಿಸಿದ ಹಾಡುಗಳಿಗೆ ಸೊಗಸಾಗಿ ಹೆಜ್ಜೆ ಹಾಕುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ತಮ್ಮ ಮಕ್ಕಳ ಮುದ್ದಾದ ಡ್ಯಾನ್ಸ್ ನೋಡಿ ಪೋಷಕರು ಖುಷಿ ಪಟ್ಟರು. ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಕ್ರೀಡಾ, ಪಠ್ಯ ಚಟುವಟಿಕೆಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಸಮತಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಹ.ಮ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಆಟ, ಪಾಠದ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ತಿಳಿಸಿಕೊಟ್ಟರು. ಮಕ್ಕಳ ಭವಿಷ್ಯದ ಕುರಿತು ಪೋಷಕರು ಯಾವ ರೀತಿ ಚಿಂತಿಸಬೇಕು ಎಂದು ಕಿವಿ ಮಾತು ಹೇಳಿದರು. ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆರೂಟಗಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಂ.ಬಿ ಯಡ್ರಾಮಿ ಅವರನ್ನು ಸನ್ಮಾನಿಸಲಾಯಿತು. ಶಾಂತಾಬಾಯಿ ಕಟಗಿಗಾಣ, ದ್ರಾಕ್ಷಾಯಣಿ ಪಾಟೀಲ, ಪತ್ರಕರ್ತ ರಮೇಶ ಪೂಜಾರ, ಜ್ಯೋತಿ ಪೂಜಾರ ಉಪಸ್ಥಿತರಿದ್ದರು.