ಸಿಂದಗಿ: ಸಾವಿರಾರು ವರ್ಷಗಳ ಇತಿಹಾಸ ಇರುವ ದ್ರಾವಿಡ ಭಾಷೆಯ ಅತೀ ದೊಡ್ಡ ಭಾಷೆ ಕನ್ನಡವು ಸಂಪತ್ಭರಿತವಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಂ ಎಂ ಪಡಶೆಟ್ಟಿ ಹೇಳಿದರು. ನಗರದ ಸಿ.ಎಂ. ಮಗನೂಳಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ರು.
ಕನ್ನಡವೆಂಬುದು ಒಂದು ಭಾಷೆಯಾಗದೆ, ಪ್ರತಿಯೊಬ್ಬ ಕನ್ನಡಿಗನ ಬದುಕಾಗಿ ಬೆಳಕಾಗಿ ಅದು ಕಲೆ, ಸಾಹಿತ್ಯ, ಸಂಗೀತ ವಾಂಗ್ಮಯದಲ್ಲಿ ಸಾಕಾರಗೊಳ್ಳುತ್ತದೆ. ದತ್ತಿದಾನ ಶಾಸನಗಳು ರಾಜಮಹಾರಾಜರ ಕಾಲದಲ್ಲಿತ್ತು. ಇಂದು ಕನ್ನಡ ಸಾಹಿತ್ಯ ಪರಿಷತ್ತು ಮುಂದುವರೆಸಿಕೊಂಡು ಹೋಗುವ ಸಂಪ್ರದಾಯ ಸ್ತುತ್ಯಾರ್ಹವಾಗಿದೆ ಎಂದರು.
ಅನುಭಾವ ಸಾಹಿತ್ಯ ವಿಷಯದ ಕುರಿತು ಉಪನ್ಯಾಸ ನೀಡಿದ ಬಳಗಾನೂರ ಶಾಲೆ ಮುಖ್ಯಶಿಕ್ಷಕ ಎಸ್.ಬಿ ಪಾಗದ, ಅನುಭಾವವೆಂಬುದು ಕೂಸು ಕಂಡ ಕನಸು. ಅದೊಂದು ಅನುಸಂಧಾನ, ಪ್ರಗತಿ. ಧರ್ಮದ ಹಾದಿಯಲ್ಲಿ ಜೀವನ ಮುಕ್ತಿಯ ಮಾರ್ಗವಾಗಿದೆ. ಅಂತರಂಗದ ಕಸ ಗುಡಿಸಲು ಬುದ್ಧ ಬಂದ. ಅಜ್ಞಾನದ ಕತ್ತಲೆ ಕಳೆಯಲು ಶಂಕರ ಬಂದ. ಅಸ್ಪೃಶ್ಯತೆಯ ಮೈಲಿಗೆ ತೊಳೆಯಲು ಬಸವ ಬಂದ. ಮೋಹದ ರಾಡಿ ತೊಳೆಯಲು ಮಹಾವೀರ ಬಂದ. ಆದರೂ ವ್ಯವಸ್ಥೆ ಸರಿಯಾಗಲಿಲ್ಲ ಅಂತಾ ವಿಷಾದ ವ್ಯಕ್ತಪಡಿಸಿದ್ರು.
ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ.ಎ ಬಿ ಸಿಂದಗಿ ಕಾರ್ಯಕ್ರಮವನ್ನ ಉದ್ಘಾಟಿಸಿದ್ರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಪ್ರಸ್ತಾವಿಕವಾಗಿ ಮಾತನಾಡಿದ್ರು. ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಶೇಖರ ದೇವರೆಡ್ಡಿ, ಪ್ರಾಧ್ಯಾಪಕ ಅರವಿಂದ ಮನಗೂಳಿ ವೇದಿಕೆ ಮೇಲಿದ್ದರು. ಪ್ರಾಧ್ಯಾಪಕರಾದ ಎಂ.ಬಿ ಬಿರಾದಾರ, ಜಿ.ಪಿ ಕಾಂಬಳೆ, ಎಂ.ಎಸ್ ಹೊಸಮನಿ, ಎಂ.ಎಲ್ ಪರಮಾನಂದ, ವ್ಹಿ.ಡಿ ಮಾಸ್ತಿ ಮತ್ತು ಶೋಭಾ ಪೂಜಾರಿ ಉಪಸ್ಥಿತರಿದ್ರು. ದತ್ತಿ ಸಂಚಾಲಕ ಸಾಯಿಬಣ್ಣ ದೇವರಮನಿ ನಿರೂಪಿಸಿದರು. ಡಾ.ಪ್ರಕಾಶ ವಂದಿಸಿದರು.