ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಸ್ಪರ್ಧಿಸುತ್ತಿದ್ದಾರೆ. ಇದೀಗ ಅವರಿಗೆ ಕನ್ನಡ ಚಿತ್ರರಂಗದ ನಿರ್ಮಾಪಕರು, ಚಿತ್ರ ವಿತರಕರು, ಪ್ರದರ್ಶಕರು ಬೆಂಬಲ ಘೋಷಿಸಿದ್ದಾರೆ.
ಸೋಮವಾರ ಶಿವರಾಜಕುಮಾರ್ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಚಿತ್ರರಂಗದ ಸೇವೆಯನ್ನು ದೊಡ್ಮನೆ ಮಾಡಿಕೊಂಡು ಬರುತ್ತಿದೆ. ಈಗ ಜನರ ಸೇವೆ ಮಾಡಬೇಕು ಎನ್ನುತ್ತಿದ್ದಾರೆ. ಗೀತಾ ಅವರ ಬೆನ್ನಿಗೆ ನಾವೆಲ್ಲ ನಿಂತುಕೊಳ್ಳುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಹೇಳಿದ್ದಾರೆ.
ಶಿಕ್ಷಣ ಸಚಿವ ಹಾಗೂ ಗೀತಾ ಸಹೋದರ ಮಧು ಬಂಗಾರಪ್ಪ ಮಾತನಾಡಿ, ಬೇರೆಯವರ ಒಡೆದು ಹೋದ ಮನೆಯತ್ತ ನಾವು ನೋಡುವುದಿಲ್ಲ. ಗೆಲ್ಲುವುದಕ್ಕೆ ಗೀತಾ ಅವರನ್ನು ನಿಲ್ಲಿಸಿದ್ದೇವೆ. ಗೆದ್ದ ನಂತರ ಅವರೆ ಕ್ಷೇತ್ರವನ್ನು ನೋಡಿಕೊಳ್ಳುತ್ತಾರೆ ಎನ್ನುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟರು.
ಶಿವರಾಜಕುಮಾರ್ ಅವರು ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಅವರ ಸಿನಿಮಾಗಳ ಶೂಟಿಂಗ್ ನೋಡಿಕೊಂಡು ಬರುತ್ತಾರೆ. ಮಾರ್ಚ್ 21ಕ್ಕೆ ಕೊಲ್ಲೂರು ಮೂಕಾಂಬಿಕಾ ದರ್ಶನ ಮಾಡಿ ಬೈಂದೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು. ಗೀತಾ ಶಿವರಾಜಕುಮಾರ್ ಅವರ ಪ್ರಚಾರಕ್ಕೆ ಯಾವೆಲ್ಲ ನಟ, ನಟಿಯರು, ಕಲಾವಿದರು ಭಾಗವಹಿಸುತ್ತಾರೆ ಎನ್ನುವ ಕುತೂಹಲವಿದೆ.