ಪ್ರಜಾಸ್ತ್ರ ಸುದ್ದಿ
ಆಲಮೇಲ: ದೇಶದ ತುಂಬಾ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಮಂಗಳವಾರ ಪ್ರತಿಷ್ಠಾಪನೆಗೊಂಡ ಗಣೇಶನನ್ನು ಐದು ದಿನಗಳ ಕಾಲ ಪೂಜಿಸಿಕೊಂಡು ಬಂದಿದ್ದು, ಇಂದು ಸಂಜೆ ವಿಸರ್ಜನೆ ಮಾಡಲಾಗುತ್ತೆ. ಇದೇ ರೀತಿ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಶನಿವಾರ ಸಂಜೆ ವಿಸರ್ಜನೆ ಕಾರ್ಯಕ್ರಮ ತುಂಬಾ ಅದ್ಧೂರಿಯಾಗಿ ನಡೆಸಲಾಗುತ್ತೆ.
ಸುಮಾರು 16 ಗಣೇಶ ಉತ್ಸವ ಸಮಿತಿಗಳು ಪಟ್ಟಣದಲ್ಲಿವೆ. ಇವುಗಳ ಮೇಲೆ ಗಜನಾನ ಮಹಾಮಂಡಳಿ ಇದೆ. ಇದಕ್ಕೆ ಮಹಿಬೂಬ್ ಮಸಳಿ ಎಂಬುವರು ಕಳೆದ 16 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಹಿಂದೂ-ಮುಸ್ಲಿಂರು ಕೂಡಿಕೊಂಡು ಕೋಮು ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ.
ಪುಣೆ ಮಾದರಿಯಲ್ಲಿ ಏಕಕಾಲದಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದನ್ನು ನೋಡಲು ಪರ ಊರು, ಜಿಲ್ಲೆಗಳಿಂದ ಜನರು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದು, ಅವರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಬೆಳಗಿನಜಾವದ ತನಕ ಮೆರವಣಿಗೆ ನಡೆದು, ಮಸೂತಿ ಬಾವಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತೆ.
ಈ ಎಲ್ಲ ಕಾರ್ಯಕ್ರಮಗಳ ಮುಂದಾಳತ್ವವನ್ನು ಮಹಿಬೂಬ್ ಮಸಳಿ, ಅಶೋಕಗೌಡ ಕೊಳಾರಿ, ರಮೇಶ ಬಂಟನೂರ, ಪ್ರಭು ವಾಲೀಕಾರ, ಶ್ರೀಶೈಲ ಮಠಪತಿ, ಶಿವುಸರ್ ಗುಂದಗಿ, ಅಪ್ಪು ಶೆಟ್ಟಿ, ಮಹಾಂತ ಹಳೇಮನಿ, ವಿನಾಯಕ ಕಲಶೆಟ್ಟಿ, ಸೇರಿದಂತೆ ಅನೇಕರು ವಹಿಸಿಕೊಂಡಿದ್ದಾರೆ.