ಹುಬ್ಬಳ್ಳಿ: ರಾತ್ರೋ ರಾತ್ರಿ ದೇವತೆ ಕಣ್ಣು ಬಿಟ್ಟ ಅಪರೂಪದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎನ್ನಲಾಗ್ತಿದೆ. ಹುಬ್ಬಳ್ಳಿಯ ಮಂಟೂರ್ ಬಳಿಯ ಶ್ರೀ ರಾಮ ದೇವಸ್ಥಾನದ ಹತ್ತಿರದ ನಲ್ಲಮ್ಮದೇವಿ ದೇವಸ್ಥಾನದಲ್ಲಿ ಈ ಅಚ್ಚರಿ ನಡೆದಿದೆ ಎನ್ನಲಾಗ್ತಿದೆ. ರಾತ್ರೋ ರಾತ್ರಿ ನಲ್ಲಮ್ಮದೇವಿಗೆ ಕಣ್ಣು ಪ್ರತ್ಯಕ್ಷವಾಗಿರುವ ಸುದ್ದಿ ಎಲ್ಲೆಡೆ ಭರ್ಜರಿಯಾಗಿ ವೈರಲ್ ಆಗ್ತಿದೆ.
ಸಾಮಾಜಿಕ ಜಾಲ ತಾಣದಲ್ಲಿ ದೇವರು ಕಣ್ಣು ಬಿಟ್ಟ ಸುದ್ದಿ ಭಾರಿ ಸದ್ದು ಮಾಡಿದೆ. ಈ ಸುದ್ದಿ ಜನರಿಂದ ಜನರಿಗೆ ಹಬ್ಬಿ ದೇವರನ್ನು ನೋಡಲು ಜನರು ಮುಗಿಬಿದಿದ್ದಾರೆ. ದೇವರ ವಿಗ್ರಹಕ್ಕೆ ಬೆಳ್ಳಿ ಕಣ್ಣು ಅಳವಡಿಸಲಾಗಿತ್ತು. ಕಳ್ಳರು ದೇವರ ಕಣ್ಣು ಕದ್ದಿದ್ದರು. ಬಳಿಕ ದೇವಸ್ಥಾನಕ್ಕೆ ಅರ್ಚಕರು ಬೀಗ ಹಾಕಿದ್ದರು. ನಿನ್ನೆ ಸಂಜೆ ದೇವಸ್ಥಾನದ ಅರ್ಚಕರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಂದು ಸಂಜೆ ಮತ್ತೆ ದೇವರಿಗೆ ಕಣ್ಣು ಪ್ರತ್ಯಕ್ಷವಾಗಿದೆ ಅಂತಾ ಹೇಳಲಾಗ್ತಿದೆ.
ರೇಲ್ವೆ ಇಲಾಖೆಯ ಜಾಗದಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನ ತೆರವು ಮಾಡಲು ರೈಲ್ವೆ ಇಲಾಖೆ ಮುಂದಾಗಿತ್ತು. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈಗ ನೋಡ ನೋಡುತಿದ್ದಂತೆ ದೇವತೆ ಕಣ್ಣು ಬಿಟ್ಟಿದ್ದು ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ. ಬ್ಯಾರಿಕೇಡ್ ಹಾಕಿ ಜನರನ್ನ ಸರತಿ ಸಾಲಿನಲ್ಲಿ ದೇವರನ್ನ ನೋಡಲು ಬಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.