ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜಧಾನಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದರಿಂದಾಗಿ ಕಳೆದ 15 ದಿನಗಳಿಂದಲೂ ಜನರು ಹೈರಾಣಾಗಿ ಹೋಗಿದ್ದಾರೆ. ಸತತವಾಗಿ ಮಳೆಯಾಗುತ್ತಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ತಗ್ಗು ಪ್ರದೇಶಗಳಿಗೆ, ರಾಜಕಾಲುವೆ ಒತ್ತುವರಿಯಾದ ಏರಿಯಾಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಅಂಡರ್ ಪಾಸ್ ಗಳಲ್ಲಿ ಸಂಚರಿಸುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ರಾತ್ರಿಯೂ ಸಹ ನಗರದಲ್ಲಿ ಭಾರೀ ಮಳೆಯಾಗಿದೆ. ಓಕಳಿಪುರಂ, ಮಲ್ಲೇಶ್ವರಂ, ರೇಸ್ ಕೋರ್ಸ್ ರಸ್ತೆ, ಮೆಜೆಸ್ಟಿಕ್, ಗಾಯತ್ರಿನಗರ, ಕೆ.ಪಿ ಅಗ್ರಹಾರ, ಕಾಟನ್ ಪೇಟೆ, ಲಕ್ಷ್ಮೀನಾರಾಯಣಪುರ ಸೇರಿದಂತೆ ಬಹುತೇಕ ಕಡೆ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಬಂಗಾಳಕೊಲ್ಲಿ ವಾಯುಭಾರ ಕುಸಿತದ ಎಫೆಕ್ಟ್ ಜೋರಾಗಿದ್ದು, ಅಕ್ಟೋಬರ್ 23ರಿಂದ ಇನ್ನು ಹೆಚ್ಚಿನ ಮಳೆಯಾಗಲಿದೆ ಎನ್ನಲಾಗುತ್ತಿದೆ.