ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಬುಧುವಾರದ ಕರೋನಾ ವರದಿಯ ಪ್ರಕಾರ 394 ಸೋಂಕಿತರು ಪತ್ತೆಯಾಗಿದ್ದಾರೆ. ಸಿಂದಗಿ ತಾಲೂಕಿನಲ್ಲಿ ಸಹ ಸೋಂಕಿತರು ಹಾಗೂ ಸಾವಿನ ಪ್ರಮಾಣ ಹೆಚ್ಚಾಗ್ತಿದೆ. ಇದರ ನಡುವೆ ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಎದುರಾಗಿದೆ.
ಕೋವಿಡ್ ಸೋಂಕಿತರಿಗಾಗಿ 25 ಹಾಸಿಗೆಯ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾತಿಯೂ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಲ್ದೇ, ಕೋವಿಡ್ ಸೋಂಕಿನಿಂದ ದಿನಕ್ಕೆ ಒಬ್ಬರಲ್ಲ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಇಷ್ಟಾದ್ರೂ ತಾಲೂಕು ಆಸ್ಪತ್ರೆಯಲ್ಲಿರುವ 2 ವೆಂಟಿಲೇಟರ್ ಗಳು ಕಾರ್ಯನಿರ್ವಹಿಸ್ತಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿರುವ 2 ವೆಂಟಿಲೇಟರ್ ಗಳು ಸ್ಟಾರ್ಟ್ ಇಲ್ಲ. ಆಪ್ ರೇಟರ್ ಇಲ್ಲದ ಕಾರಣ ಅವುಗಳನ್ನ ಬಳಕೆ ಮಾಡಲು ಆಗುತ್ತಿಲ್ಲವೆಂದು ಟಿಎಚ್ಓ ಹೇಳ್ತಿದ್ದಾರೆ. ಇದರಿಂದಾಗಿ ದಿನಕ್ಕೆ ಒಬ್ಬರಾದರೂ ಸಾಯುತ್ತಿದ್ದಾರೆ. ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ?
ಸಂತೋಷ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದಲಿತ ಸೇನೆ
ತಾಲೂಕು ಆಸ್ಪತ್ರೆಯಲ್ಲಿನ ವೆಂಟಿಲೇಟರ್ ಸಮಸ್ಯೆಯ ಬಗ್ಗೆ ತಹಶೀಲ್ದಾರ್ ಅವರನ್ನ ಕೇಳಿದಾಗ ಅವರು ಹೇಳಿದ್ದು ಹೀಗೆ..
ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಡಿಸಿ, ಸಿಇಒ ಅವರ ಜೊತೆಯೂ ಮಾತ್ನಾಡಲಾಗಿದ್ದು, ಆಪ್ ರೇಟರ್ ಗಳನ್ನ ನೇಮಿಸಿಕೊಳ್ಳಿ ಎಂದಿದ್ದಾರೆ. ಆದ್ರೆ, ಯಾರೂ ಮುಂದೆ ಬರುತ್ತಿಲ್ಲ. ಆದಷ್ಟು ಬೇಗ ಸಮಸ್ಯೆಯನ್ನ ಬಗೆಹರಿಸಲಾಗುತ್ತೆ.
ಸಂಜೀವಕುಮಾರ ದಾಸರ, ತಹಶೀಲ್ದಾರ್, ಸಿಂದಗಿ
ತಾಲೂಕು ಆಸ್ಪತ್ರೆಯಲ್ಲಿನ ಸಮಸ್ಯೆಯಿಂದ ಕೋವಿಡ್ ರೋಗಿಗಳಿಗೆ ಆಗ್ತಿರುವ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು, ಆದಷ್ಟು ಬೇಗ ಪರಿಹಾರ ನೀಡಬೇಕು. ಇದರ ಜೊತೆಗೆ ಸಾರ್ವಜನಿಕರು ಸಹ ತುಂಬಾ ಎಚ್ಚರಿಕೆಯಿಂದ ಇರಬೇಕು. ಮಾಸ್ಕ್, ಸ್ಯಾನ್ ಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.