ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. 68 ಕ್ಷೇತ್ರಗಳಲ್ಲಿ ಕಾಂಗ್ರೆಸ್ 40ರಲ್ಲಿ ಜಯಭೇರಿ ಭಾರಿಸಿ ಅಧಿಕಾರ ನಡೆಸಲು ಸಜ್ಜಾಗಿದೆ. ಆದರೆ, ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್, ‘ರಾಜ್ ನಹೀ ರಿವಾಜ್ ಬದಲೇಗಾ’ ಅನ್ನೋ ಘೋಷಣೆ ಮೂಲಕ ಮತ್ತೊಮ್ಮೆ ಕಮಲ ಅರಳಿಸಲು ಹೊರಟರೂ ಸಾಧ್ಯವಾಗಿಲ್ಲ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ತವರು ರಾಜ್ಯವಾಗಿದೆ. ಇಲ್ಲಿ ಟಿಕೆಟ್ ಹಂಚಿಕೆಯೂ ಬಿಜೆಪಿ ತಿರುಮಂತ್ರವಾಗಿದೆ.
21 ಬಿಜೆಪಿ ನಾಯಕರು ಪಕ್ಷದ ವಿರುದ್ಧ ಬಂಡಾಯವೆದ್ದರು. ಹಲವರು ಪಕ್ಷೇತರರಾಗಿ ಸ್ಪರ್ಧಿಸಿ ಮತಗಳ ವಿಭಜನೆಯಾಗುವ ಮೂಲಕ ಬಿಜೆಪಿ ಸೋಲಿಗೆ ನೇರವಾಗಿ ಕಾರಣರಾದರು. ಇನ್ನು ನಿರುದ್ಯೋಗ, ಅಗ್ನಿ ವೀರ್ ವಿಚಾರ, ಹಳೆಯ ಪಿಂಚಣಿ ಯೋಜನೆ(ops) ಸಾಕಷ್ಟು ಸದ್ದು ಮಾಡಿತು. ಸೇಬು ಬೆಳೆಗಾರರ ಆಕ್ರೋಶ, ಹಣದುಬ್ಬರ ಸೇರಿದಂತೆ ಹಲವು ವಿಚಾರಗಳಿಗಾಗಿ ಆಡಳಿತ ವಿರೋಧಿ ಅಲೆ ಎದ್ದ ಪರಿಣಾಮ ಬಿಜೆಪಿಗೆ ಸೋಲಾಗಿದೆ.
ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಣಿವೆ ನಾಡಿನಲ್ಲಿ ಪಕ್ಷದ ಪ್ರಚಾರದ ಜವಾಬ್ದಾರಿ ವಹಿಸಿದ್ದರು. ರಾಜ್ಯಾದ್ಯಂತ 10 ರ್ಯಾಲಿಗಳನ್ನು ಮಾಡಿದರು. ಮಹಿಳಾ ಮತದಾರರನ್ನು ಸೆಳೆದರು. ಅವರ ಪರವಾದ ಯೋಜನೆಗಳ ಕುರಿತು ಭರವಸೆ ನೀಡಿದರು. 18ರಿಂದ 60 ವರ್ಷದ ಮಹಿಳೆಯರೆಗೆ ಮಾಸಿಕ 1,500 ರೂಪಾಯಿ ಪ್ರೋತ್ಸಾಹಧನ ನೀಡುವ ಭರವಸೆ ವರ್ಕೌಟ್ ಆಗಿದೆ. ಹೀಗಾಗಿ ಇದು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೊದಲ ಗೆಲುವು ಆಗಿದೆ.