ಅಥಣಿ: ಹಿಪ್ಪರಗಿ ಅಣೆಕಟ್ಟೆಯಿಂದ ಸುಮಾರು 5 ಸಾವಿರ ಕ್ಯೂಸೆಕ್ಸ್ ನೀರನ್ನ ನೇರೆಯ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿಗೆ ಹರಿ ಬಿಡಲಾಗಿದೆ. ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು, ಹಿಪ್ಪರಗಿ ಅಣೆಕಟ್ಟಿನ ಬಳಿ ಪೂಜೆ ಸಲ್ಲಿಸುವ ಮೂಲಕ 5 ಸಾವಿರ ಕ್ಯೂಸೆಕ್ಸ್ ನೀರನ್ನ ಹರಿ ಬಿಡಲಾಗಿದೆ.
ಈ ವೇಳೆ ಮಾತ್ನಾಡಿದ ಅವರು, ಈ ನೀರನ್ನ ಬಿಡುವದರಿಂದ ಈ ಭಾಗದ ಜನರಿಗೆ ನೀರಿನ ಸಮಸ್ಯೆ ಆಗುವದಿಲ್ಲ. ಮಳೆಗಾಲ ಬರುವರಗೆ ನದಿಯಲ್ಲಿ ಸಾಕಷ್ಟು ನೀರು ಇದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರದ ಆದೇಶದಂತೆ ನೀರು ಬಿಡಬೇಕಾಗುತ್ತದೆ. ಈ ವರ್ಷ ಯಾವ ಕಾರಣಕ್ಕೂ ನೀರಿನ ಸಮಸ್ಯೆ ಆಗುವದಿಲ್ಲ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.
ನೀರು ಬಿಡುವ ಬಗ್ಗೆ ಈ ಭಾಗದ ರೈತರು ಮೊದಲಿಂದಲೂ ಆಕ್ರೋಶ ವ್ಯಕ್ತಪಡಿಸಿಕೊಂಡು ಬರ್ತಿದ್ದಾರೆ. ಈ ನೀರು ಬೀಡುತ್ತಿದಂತೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವರ್ಷ ಇದೆ ಸಮಯದಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋದಾಗ ನಾವು ಒಂದು ವಾರಗಳ ಕಾಲ ಒಣಗಿದ ನದಿಯಲ್ಲಿಯೇ ಆಮರಣ ಹೋರಾಟ ಮಾಡಿದ್ದೇವೆ. ಅಂದು ಶಾಸಕರು ಅಂದಿನ ಆಡಳಿತ ಪಕ್ಷದಲ್ಲಿದ್ದರು. ನೇರೆ ಮಹಾರಾಷ್ಟ್ರದಿಂದ ಒಂದು ಹನಿ ನೀರು ತರಲಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ ಆಕ್ರೋಶ ಹೊರ ಹಾಕಿದ್ದಾರೆ.
ನೀರು ಬಿಟ್ಟಿದ್ದಕ್ಕೆ ನಮ್ಮದು ಸಂಪೂರ್ಣ ವಿರೋಧವಿದೆ. ಮುಂದಿನ ದಿನಗಳಲ್ಲಿ ಕಂಡಿತವಾಗಿ ಅಥಣಿ ರಾಯಬಾಗ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗುವದು ಸತ್ಯ. ಆಗ ನಾವು ಉಗ್ರ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎಂದು ವಿಜಯ ಸೇನೆ ಜಿಲ್ಲಾಧ್ಯಕ್ಷ ಚಿದಾನಂದ ಶೇಗುಣಸಿ ಕಿಡಿ ಕಾರಿದ್ದಾರೆ.
ಈ ಸಮಯದಲ್ಲಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡರ, ತೇರದಾಳ ಶಾಸಕ ಸಿದ್ದು ಸವದಿ ಹಾಜರಿದ್ರು.