ಬೆಂಗಳೂರು: ರಾಜ್ಯದಲ್ಲಿಯೂ ಕರೋನಾ ವೈರಸ್ ರಣಕೇಕೆ ಹಾಕುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ಸರಿಯಾದ ಹಾದಿಯಲ್ಲಿ ಹೊರಟಿದೆ ಅನ್ನೋ ಹೊತ್ತಿನಲ್ಲಿ, ಮತ್ತೆ ಹಾದಿ ತಪ್ಪಿದ್ಯಾ ಅನ್ನೋ ಅನುಮಾನ ಬಂದಿದೆ. ಯಾಕಂದ್ರೆ, ಇಂದು ಒಂದೇ ದಿನದಲ್ಲಿ ಬರೋಬ್ಬರಿ 45 ಕೇಸ್ ಗಳು ದಾಖಲಾಗಿವೆ.
ದಾವಣಗೆರೆಯಲ್ಲಿ 14, ಉತ್ತರ ಕನ್ನಡದ ಭಟ್ಕಳದಲ್ಲಿ 12, ಬೆಳಗಾವಿಯಲ್ಲಿ 11, ಬೆಂಗಳೂರು ನಗರ 07 ಹಾಗೂ ಬಳ್ಳಾರಿಯಲ್ಲಿ 1 ಪ್ರಕರಣ ದಾಖಲಾಗಿದೆ. ಈ ಸಂಖ್ಯೆ ಇಷ್ಟು ದಿನಗಳ ದಾಖಲೆಯನ್ನ ಮುರಿದಿದೆ. ಹಾಗಂತ ಖುಷಿ ಪಡುವ ವಿಚಾರ ಅಲ್ವಲ್ಲ. ಇದೆಲ್ಲ ನೋಡ್ತಿದ್ರೆ ರಾಜ್ಯ ಸರ್ಕಾರ ಕರೋನಾ ಕಂಟ್ರೋಲ್ ಮಾಡುವಲ್ಲಿ ಯಡವುತ್ತಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.
ಕೇಂದ್ರದ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ, ಸಡಿಲಿಕೆ ಅನ್ನೋದು ಕೈತಪ್ಪಿದೆ. ಹೀಗಾಗಿ ನಗರ, ಪಟ್ಟಣ, ಹೋಬಳಿ, ಗ್ರಾಮಗಳಲ್ಲಿ ಎಂದಿನಂತೆ ಜನಜೀವನ ಸಾಗಿದೆ. ಮೇ 17ರ ತನಕ ಲಾಕ್ ಡೌನ್ ಇದೆ ಅನ್ನೋದು ಎಲ್ಲರೂ ಮರೆತು ಭರ್ಜರಿಯಾಗಿ ಓಡಾಟ ನಡೆಸಿದ್ದಾರೆ. ಇಷ್ಟು ದಿನಗಳ ಕಾಲ ಇದ್ದ ಕಠಿಣತೆ ಈಗಿಲ್ಲ. ಅನುಮತಿ ನೀಡಿದ ವ್ಯಾಪಾರ ವಹಿವಾಟು ಸೇರಿದಂತೆ ಇತರೆ ವ್ಯಾಪಾರ ಸಹ ಜೋರಾಗಿ ನಡೆದಿದೆ.
ಎಲ್ಲಿ ತಪ್ಪುತ್ತಿದೆ ಲಾಕ್ ಡೌನ್ 3.0?
ಸಡಿಲಿಕೆ ಅನ್ನೋದು ದುರ್ಬಳಕೆಯಾಗ್ತಿರುವುದು
ಅಂತರ ರಾಜ್ಯ, ಅಂತರ ಜಿಲ್ಲೆ ಸಂಚಾರಕ್ಕೆ ಅವಕಾಶ ನೀಡಿರುವುದು
ರಾಜ್ಯದ ಗಡಿಗಳಲ್ಲಿ ಮೊದಲಿದ್ದ ಕಟ್ಟುನಿಟ್ಟಿನ ಕ್ರಮ ಕಡೆಮೆಯಾಗಿರುವುದು
ಸಾಮಾಜಿಕ ಅಂತರ ಮಾಯ. ಮಾಸ್ಕ್ ಮರೆತ ಜನತೆ
ಸರ್ಕಾರದ ಯೋಜನೆ ಪಡೆಯಲು ಮುಗಿಬಿದ್ದ ಜನರು
ನಗರ, ಪಟ್ಟಣ, ಗ್ರಾಮಗಳಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ನಿಯಮ ಉಲ್ಲಂಘನೆ
ಎಲ್ಲೆಡೆ ಮಾರ್ಕೆಟ್ ಅನ್ನೋದು ಎಂದಿನಂತೆ ಸಾರ್ವಜನಿಕರಿಂದ ತುಂಬಿವೆ
ಬಹುಬೇಗ ಕರೋನಾ ಜಾಗೃತಿ ಮರೆತು ಬೀದಿಗಿಳಿದ ಜನತೆ
ಅಧಿಕಾರಿಗಳಲ್ಲಿ ಮೊದಲಿದ್ದ ಜೋಶ್ ಸಂಪೂರ್ಣ ಮರೆಯಾಗಿದೆ
ಲಾಕ್ ಡೌನ್ ಉಲ್ಲಂಘನೆಯಾದ್ರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಪೊಲೀಸ್ ಸಿಬ್ಬಂದಿ ಎದುರೆ ಜನರು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ರೂ ಯಾವುದೇ ಕ್ರಮವಿಲ್ಲ
ಹೀಗೆ ಲಾಕ್ ಡೌನ್ ಸಡಿಲಿಕೆ ಅನ್ನೋದನ್ನೇ ಜನ ಮುಗಿಯಿತು ಎಂದುಕೊಂಡು ಮನಸ್ಸಿಗೆ ಬಂದಂತೆ ನಡೆದುಕೊಳ್ತಿದ್ದಾರೆ. ಅಧಿಕಾರಿಗಳು ಸಹ ಮೊದಲಿನಂತೆ ಕಟ್ಟುನಿಟ್ಟಾಗಿ ಜನರನ್ನ ಕಂಟ್ರೋಲ್ ಮಾಡ್ತಿಲ್ಲ. ಬಹುತೇಕ ಕಡೆ ಸರ್ಕಾರಿ ಕಚೇರಿಗಳ ಸುತ್ತಮುತ್ತವೇ ಲಾಕ್ ಡೌನ್ ಸಂಪೂರ್ಣವಾಗಿ ಉಲ್ಲಂಘನೆಯಾದ್ರೂ ಡೋಂಟ್ ಕೇರ್ ಆಗಿದೆ. ಅಂದ್ರೆ, ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಅನ್ನೋ ಅನುಮಾನ ಬರ್ತಿದೆ. ಹೀಗಾಗಿ ರಾಜ್ಯದಲ್ಲಿ ಕರೋನಾ ಕಂಟ್ರೋಲ್ ಆಗುವ ಬದಲು ಏರಿಕೆಯಾಗ್ತಿದೆ. ಪಕ್ಕದ ಕೇರಳ, ಆಂಧ್ರ, ತಮಿಳುನಾಡಿನಲ್ಲಿ ಆಗ್ತಿರುವ ಕಂಟ್ರೋಲ್ ರಾಜ್ಯದಲ್ಲಿ ಆಗದೆಯಿರುವುದಕ್ಕೆ ಇದೆಲ್ಲ ಕಾರಣವಾಗಿವೆ.