ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ರೂಪಾಂತರ ಸೋಂಕು ಹೆಚ್ಚುತ್ತಿದೆ ಎಂದು ಸರ್ಕಾರದ ವರದಿಗಳು ಹೇಳುತ್ತಿವೆ. ಹೀಗಾಗಿ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಸಹ ಜಾರಿಗೆ ಮಾಡಲಾಗಿದೆ. ರಾಜಧಾನಿಯಲ್ಲಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ಮಾಡಲಾಗುತ್ತಾ ಅನ್ನೋ ಆತಂಕ ಶುರುವಾಗಿದೆ.
ಲಾಕ್ ಡೌನ್ ಬಗ್ಗೆ ಕಂದಾಯ ಸಚಿವರು, ಆರೋಗ್ಯ ಸಚಿವರು, ಗೃಹ ಸಚಿವರು ಸೇರಿದಂತೆ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಎರಡು ವರ್ಷದಿಂದ ಲಾಕ್ ಡೌನ್, ಕರ್ಫ್ಯೂ, ಕಠಿಣ ಕ್ರಮ, ದಂಡ ವಸೂಲಿ ಮಾಡಿ ಮಾಡಿ ಜನರು ಸಂಕಷ್ಟಕ್ಕೆ ಸಿಕ್ಕು ನರಳುತ್ತಿದ್ದಾರೆ. ಆದರೆ, ಇದೀಗ ಓಮಿಕ್ರಾನ್ ಸೋಂಕಿನ ಹೆಸರಿನಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಮೂಲಕ ತುಘಲಕ್ ದರ್ಬಾರ್ ಮಾಡುತ್ತಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಆಡಳಿತ ಪಕ್ಷದ ಶಾಸಕರು, ಸಚಿವರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಬಿಜೆಪಿ ಸಭೆಗಳನ್ನು ಮಾಡುತ್ತೆ. ಕಾಂಗ್ರೆಸ್ ಬೃಹತ್ ಪಟ್ಟಣದಲ್ಲಿ ಪಾದಯಾತ್ರೆ ಮಾಡುತ್ತೆ. ಇದ್ಯಾವುದನ್ನೂ ತಡೆಯದು, ನಿಲ್ಲಿಸಿದ ಸರ್ಕಾರ ಜನಸಾಮಾನ್ಯರ ಮೇಲೆ ಬರೆ ಎಳೆಯಲು ಲಾಕ್ ಡೌನ್, ಕರ್ಫ್ಯೂ ಅಸ್ತ್ರ ಪ್ರಯೋಗಿಸುವ ಮೂಲಕ ಬೀದಿಗೆ ಬರುವಂತೆ ಮಾಡುತ್ತಿರುವುದ ಮಾತ್ರ ಸತ್ಯ. ಎಲ್ಲದಕ್ಕೂ ಲಾಕ್ ಡೌನ್ ಒಂದೇ ಪರಿಹಾರವಲ್ಲವೆಂದು ಹೇಳಿದರೂ ಕೇಳದ ಸರ್ಕಾರ ಬಲವಂತದಿಂದ ಎಲ್ಲವನ್ನೂ ಬಂದ್ ಮಾಡಲು ಹೊರಟಿರುವುದ ಮಾತ್ರ ದುರಂತ.