ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ರಾಜ್ಯ ಜನತೆ ಸಾಕಷ್ಟು ಹೈರಾಣಾಗಿದ್ದಾರೆ. 2ನೇ ಹಂತದಲ್ಲಿ ಲಾಕ್ ಡೌನ್ ನಲ್ಲಿದ್ದು, 3ನೇ ಹಂತದ ಮುನ್ಸೂಚನೆ ಸಹ ಸಿಕ್ಕಿದೆ. ಹೀಗಾಗಿ ಲಾಕ್ ಡೌನ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ವಿಪಕ್ಷ ನಾಯಕರ ಸಭೆಯನ್ನ ಮಾಜಿ ಸಿಎಂ ಸಿದ್ದರಾಮಯ್ಯನವರು ಕರೆದಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್, ಜೆಡಿಎಸ್, ಜೆಡಿಯು, ಸಿಪಿಐಎಂ ಹಾಗೂ ವಿವಿಧ ರಾಜ್ಯ ರೈತಪರ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ. ಹೀಗಾಗಿ ಎಲ್ಲ ನಾಯಕರಿಗೂ ಪತ್ರ ಬರೆದು ಸಭೆಗೆ ಬರಲು ಮನವಿ ಮಾಡಿದ್ದಾರೆ.
ನಿತ್ಯದ ದುಡಿಮೆ ನಂಬಿ ಬದುಕುತ್ತಿರುವವರು, ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಡ ಜನರ ಬವಣೆ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಬಗ್ಗೆ ಹಲವು ಸಾರಿ ಸಿಎಂ ಜೊತೆ ಸಭೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಇದೀಗ ವಿಪಕ್ಷ ನಾಯಕರೊಂದಿಗೆ ಚರ್ಚಿಸಿ, ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ರಾಜ್ಯದ ಪ್ರತಿ ವರ್ಗದ ಜನರ ಪರವಾಗಿ ಕ್ರಮ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಲಿದ್ದಾರೆ.