ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ಲೋಕಾಯುಕ್ತ ದಾಳಿಯ ಮೇಲೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಹತ್ತಿರ ಪತ್ತೆಯಾಗಿದ್ದ 8 ಕೋಟಿಗೂ ಅಧಿಕ ಹಣ, ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದಾದ ಬಳಿಕ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದ ಶಾಸಕ ವಿರೂಪಾಕ್ಷಪ್ಪಗೆ ಇಂದು ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ.
ಚನ್ನಗಿರಿ ತಾಲೂಕಿನ ಚನ್ನೇಶಪುರದ ತಮ್ಮ ಊರಿನಲ್ಲಿ ಪ್ರತ್ಯಕ್ಷರಾದ ಅವರು, ನಾನು ಎಲ್ಲಿಯೂ ಓಡಿ ಹೋಗಿರಲಿಲ್ಲ. ಊರಿನಲ್ಲೆ ಇದ್ದೆ. ಆಪಾದನೆ ಬಂದಿದ್ದರಿಂದ ಜನರ ಸಂಪರ್ಕಕ್ಕೆ ಬಂದಿರಲಿಲ್ಲ. ದಾಳಿ ವೇಳೆ ಸಿಕ್ಕ ಪ್ರತಿ ಪೈಸೆಗೂ ಲೆಕ್ಕವಿದೆ. ಅದನ್ನು ಕೊಡುತ್ತೇನೆ. ವಾಪಸ್ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಅಡಕೆ ತೋಟ, ಕ್ರಷರ್ ನಿಂದ ಬಂದ ಹಣವನ್ನು ಮನೆಯಲ್ಲಿ ಇಟ್ಟಿದ್ದೇವು. ಲೋಕಾಯುಕ್ತ ದಾಳಿಯಲ್ಲಿ ಹಣ ಪಡೆದಿದ್ದಾರೆ. 48 ಗಂಟೆಯೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ. ಕೆಎಸ್ ಡಿಎಲ್ ಅಧ್ಯಕ್ಷನಾಗಿ ನಿಯಮಬಾಹಿರ ಕೆಲಸ ಮಾಡಿಲ್ಲ ಅಂತಾ ಹೇಳಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾ ಸೇರಿ ಎಲ್ಲೆಡೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ.
ಶಾಸಕರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನುತ್ತಾರೆ. ನಾನು ಊರಿನಲ್ಲೇ ಇದ್ದೆ. ಎಲ್ಲಿಯೂ ಹೋಗಿಲ್ಲ ಎಂದು ಶಾಸಕರು ಹೇಳುತ್ತಾರೆ. ಹಂಪಿಯ ಸ್ಮಾರಕದ ಮೇಲೆ ಕುಣಿದ ರೀಲ್ಸ್ ಹುಡುಗನನ್ನು ಹಿಡಿದು ಪೋಸ್ ಕೊಡುವ ಪೊಲೀಸರು ಶಾಸಕರನ್ನು ಬಂಧಿಸಲು ತಾಕತ್ತು, ಧಮ್ ತೋರಿಸಲಿಲ್ಲ ಎಂದು ಕಿಡಿ ಕಾರುತ್ತಿದ್ದಾರೆ. ಶಾಸಕರು ಊರಲ್ಲೇ ಇದ್ದರೆ 6 ದಿನಗಳಿಂದ ಅವರನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಜನರ ವಿಶ್ವಾಸ ದಿನದಿಂದ ದಿನಕ್ಕೆ ಕಳೆದು ಹೋಗುತ್ತಿದೆ.