ಪ್ರಜಾಸ್ತ್ರ ಸುದ್ದಿ
ವಿಜಯಪುರ: ತಾಯಿಯೊಂದಿಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಮಕ್ಕಳಿಬ್ಬರು ನೀರಿಗೆ ಬಿದ್ದಿದ್ದು, ಅವರನ್ನು ಉಳಿಸಲು ಹೋದ ತಾಯಿಯೂ ಸೇರಿ ಮೂವರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಹತ್ತಿರ ನಡೆದಿದೆ.
ಗೀತಾ ಹೊನ್ನೂರ(38), ಮಗಳು ಶೋಭಿತಾ(12) ಹಾಗೂ ಮಗ ವಾಸುದೇವ(10) ಮೃತ ದುರ್ದೈವಿಗಳು. ಗ್ರಾಮದ ಹತ್ತಿರ ಹಾಯ್ದು ಹೋಗಿರುವ ಭೀಮಾನದಿಯಲ್ಲಿ ಬಟ್ಟೆ ತೊಳೆಯಲು ಗೀತಾ ಹೋಗಿದ್ದಾರೆ. ಅವರೊಂದಿಗೆ ಮಕ್ಕಳಿಬ್ಬರು ಬಂದಿದ್ದಾರೆ. ಈ ವೇಳೆ ಮಗ ವಾಸುದೇವ ನದಿಗೆ ಇಳಿದಿದ್ದಾನೆ. ಅವನನ್ನು ಉಳಿಸಲು ಮಗಳು ಶೋಭಿತಾ ಹೋಗಿದ್ದಾಳೆ. ಮಕ್ಕಳಿಗಾಗಿ ತಾಯಿ ನದಿಗೆ ಹಾರಿದ್ದಾಳೆ. ಇದರ ಪರಿಣಾಮ ಮೂವರು ನೀರುಪಾಲಾದ ದುರಂತ ನಡೆದಿದೆ.