ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮನೆಗೆ ಸಾಂತ್ವಾನ ಹೇಳಲು ಹೋಗಿದ್ದ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಮೇಲೆ ಅಲ್ಲಿಯ ಜನರು ಹಲ್ಲೆ ಮಾಡಿದ್ದರು. ಈ ಬಗ್ಗೆ ಅಂದು ಶಾಸಕರು ಮಾತನಾಡಿ ಘಟನೆ ಬಗ್ಗೆ ಹೇಳಿದ್ದರು. ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಇದೊಂದು ಸಣ್ಣ ಘಟನೆ ಅಲ್ಲ. ಜನರು ದೊಣ್ಣೆಯಿಂದ, ಕಲ್ಲಿನಿಂದ ಹೊಡೆಯಲು ಬಂದಿದ್ದರು. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಫೋನ್ ಮಾಡಿ ನನ್ನ ಆರೋಗ್ಯ ವಿಚಾರಿಸಿದ್ದಾರೆ. ಆದರೆ, ಗೃಹ ಸಚಿವರು ಸೌಜನ್ಯಕ್ಕೂ ಮಾತನಾಡಿಸಿಲ್ಲ.
ನಾನೊಬ್ಬ ದಲಿತ ಶಾಸಕ ಅನ್ನೋ ಕಾರಣದಿಂದ ಮೊನ್ನೆ ಕ್ಷೇತ್ರದಲ್ಲಿ ನಡೆದ ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿಲ್ಲ. ಗೃಹ ಸಚಿವರು ಶಾಸಕ ಅಲ್ಲ ಸಹೋದ್ಯೋಗಿ ಅಂತಾನೂ ಮಾತನಾಡಿಸಿಲ್ಲ. ಇವರು ಹೊಡಿಸಿಕೊಳ್ಳುವ, ಬೈಸಿಕೊಳ್ಳುವ ಜನರು ಎಂದು ಮನಸ್ಸಿಗೆ ಬಂದಿರಬೇಕು ಅಂತಾ ಅಸಮಾಧಾನ ಹೊರಹಾಕಿದ್ದಾರೆ. ಗೃಹ ಸಚಿವರ ನಡವಳಿಕೆ ಸರಿಯಿಲ್ಲ. ರಾಜ್ಯದ ಹೊಣೆ ಹೊತ್ತಿರುವ ಅವರು ನನ್ನ ಪ್ರಾಣ ಹೋದರೆ ಯಾರು ಹೊಣೆಗಾರರು ಅಂತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.